ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯಾಗಿ 34ವರ್ಷಗಳು ಕಳೆದ ಬಳಿಕ ಐವರು ಹತ್ಯೆ ಆರೋಪಿಗಳ ವಿರುದ್ಧ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಾಯಂಗೊಳಿಸಿದೆ. ಸುಮಾರು 11 ವರ್ಷಗಳ ಕೆಳಗೆ ಮುಜಿಬರ್ ರೆಹಮಾನ್ ಹತ್ಯೆಗೆ ಸಂಬಂಧಪಟ್ಟಂತೆ ಐವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಆದೇಶಿಸಲಾಗಿತ್ತು.
ಈ ಆದೇಶದನ್ವಯ ಆರೋಪಿಗಳು ನೇಣುಗಂಭಕ್ಕೆ ಏರುವ ಸಮಯ ಹತ್ತಿರಬಂದಿದೆ. ಸೇನಾ ಬಂಡಾಯ ನಡೆಸಿದ ಎಲ್ಲ 12 ಮಂದಿ ಸೇನಾಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದರೆ ಉಳಿದ ಏಳು ಜನರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.
1975ರ ಆಗಸ್ಟ್ 15ರಂದು ನಡೆದ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ಈ ಆರೋಪಿಗಳು ಮುಜಿಬುರ್ ಅವರ ಮನೆಗೆ ನುಗ್ಗಿ ಮುಜಿಬುರ್, ಅವರ ಪತ್ನಿ ಮತ್ತು ಮೂವರು ಪುತ್ರರನ್ನು ಗುಂಡಿಕ್ಕಿ ಕೊಂದಿದ್ದರು. ಅವರ ಪುತ್ರಿ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾ ಆ ಸಂದರ್ಭದಲ್ಲಿ ವಿದೇಶದಲ್ಲಿದ್ದರಿಂದ ಗುಂಡಿನ ದಾಳಿಯಿಂದ ಬಚಾವಾಗಿದ್ದರು. ಮನೆಯಲ್ಲಿದ್ದ ಒಟ್ಟು 20 ಮಂದಿ ಅಂದು ಗುಂಡಿಗೆ ಬಲಿಯಾಗಿದ್ದರು.
1998ರಲ್ಲಿ ಹೈಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೂ, ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರಿಂದ ಅಂತಿಮ ತೀರ್ಪು ನೀಡುವುದಕ್ಕೆ ವಿಳಂಬವಾಗಿದೆ. ಬಂಗಬಂಧು ಎಂದೇ ಖ್ಯಾತರಾದ ಶೇಖ್ ಮುಜಿಬುರ್ ರೆಹಮಾನ್ ಸಾರಥ್ಯದಲ್ಲಿ ಬಾಂಗ್ಲಾದೇಶ ಪಾಕ್ನಿಂದ ಬೇರ್ಪಟ್ಟು ಸ್ವತಂತ್ರವಾಗಿತ್ತು. ಈ ಸ್ವಾತಂತ್ರ್ಯಹೋರಾಟದಲ್ಲಿ ಭಾರತ ಮುಖ್ಯ ಪಾತ್ರ ವಹಿಸಿತ್ತು.