ತಲೆಯಲ್ಲಿ ಒಂದಕ್ಕೊಂದು ಅಂಟಿಕೊಂಡಿದ್ದ ಸಯಾಮಿ ಅವಳಿಗಳನ್ನು ಪ್ರತ್ಯೇಕಿಸುವ ಶಸ್ತ್ರಚಿಕಿತ್ಸೆ ನಡೆದ ಬಳಿಕ ದುರ್ಬಲತೆಯಿಂದ ಕೂಡಿದ ಕೃಷ್ಣಾ ಕೂಡ ಎಚ್ಚೆತ್ತಿದ್ದು, ವೈದ್ಯರು ಮತ್ತು ಪೋಷಕರು ಸಂತಸಗೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಎರಡು ಮಕ್ಕಳಿಗೂ ಅರಿವಳಿಕೆ ಮೂಲಕ ಬಲವಂತ ನಿದ್ರೆಗೆ ಒಳಪಡಿಸಲಾಗಿತ್ತು. ಈ ಪೈಕಿ ತೃಷ್ಣಾ ಎಂಬುವಳು ಎರಡು ದಿನಗಳ ನಂತರ ಎಚ್ಚೆತ್ತಿದ್ದಳು.
ಈಗ ಕೃಷ್ಣಾ ಕೂಡ ಎಚ್ಚರಗೊಂಡಿದ್ದರಿಂದ ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಢಾಕಾದ ಅನಾಥಾಲಯವೊಂದರಲ್ಲಿ ಇದ್ದ ಸಯಾಮಿ ಅವಳಿಗಳ ಪೋಷಣೆಯ ಹೊಣೆಯನ್ನು ಆಸ್ಟ್ರೇಲಿಯದ ಕೆಲ್ಲಿ ಎಂಬುವರು ವಹಿಸಿದ್ದರು.
ಮಿದುಳಿನ ಭಾಗಕ್ಕೆ ಶಸ್ತ್ರಕ್ರಿಯೆ ನಡೆದಿದ್ದರಿಂದ ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆಯೆಂದು ಶಂಕಿಸಲಾಗಿತ್ತು. ಆದರೆ ಆಶ್ಚರ್ಯಕರವಾಗಿ ಮಕ್ಕಳು ಬದುಕುಳಿಯುವ ಮೂಲಕ ವೈದ್ಯಕೀಯ ವಿಕ್ರಮವೊಂದು ಸಾಕಾರಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.