ಪಾಕಿಸ್ತಾನದಲ್ಲಿ ಯಾರೊಂದಿಗೆ ಮಾತಾಡಬೇಕೆಂದೇ ತಿಳಿಯುತ್ತಿಲ್ಲ: ಪ್ರಧಾನಿ
ವಾಷಿಂಗ್ಟನ್, ಸೋಮವಾರ, 23 ನವೆಂಬರ್ 2009( 14:34 IST )
26/11 ಮುಂಬೈ ಭಯೋತ್ಪಾದನೆ ದಾಳಿಗಳಿಗೆ ಕಾರಣಕರ್ತರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನೆರೆಯ ರಾಷ್ಟ್ರದಲ್ಲಿ ಸೇನೆ ಅತ್ಯಂತ ಪ್ರಭಾವಶಾಲಿ ಪಡೆಯಾದ್ದರಿಂದ ಇಸ್ಲಾಮಾಬಾದ್ನಲ್ಲಿ ಯಾರ ಜತೆ ವ್ಯವಹರಿಸಬೇಕೆಂದು ಭಾರತಕ್ಕೆ ತಿಳಿಯುತ್ತಿಲ್ಲವೆಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಸಿಎನ್ಎನ್ಗೆ ನೀಡಿದ ಸಂದರ್ಶನವನ್ನು ಪ್ರಧಾನಿ ಭಾನುವಾರ ವಾಷಿಂಗ್ಟನ್ಗೆ ಆಗಮಿಸುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಪ್ರಸಾರ ಮಾಡಲಾಗಿದೆ. ಪಾಕಿಸ್ತಾನ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಪಾಕ್ ಪ್ರಧಾನಿ ಗಿಲಾನಿ ಜತೆ ತಾವು ಚರ್ಚಿಸಿದ್ದೇವೆ.
ಈಜಿಪ್ಟ್ ಶರ್ಮ್ ಅಲ್-ಶೇಖ್ನಲ್ಲಿ ತಾವು ಭೇಟಿ ಮಾಡಿದಾಗ ನೀಡಿದ ಜಂಟಿ ಹೇಳಿಕೆಯಲ್ಲಿ ಮುಂಬೈ ಹತ್ಯಾಕಾಂಡದ ಕಾರಣಕರ್ತರಿಗೆ ಶಿಕ್ಷೆ ವಿಧಿಸಲು ಎಲ್ಲ ಕಾರ್ಯಸಾಧ್ಯ ಪ್ರಯತ್ನ ಮಾಡುವುದಾಗಿ ಗಿಲಾನಿ ಆಶ್ವಾಸನೆ ನೀಡಿದ್ದರೆಂದು ಪ್ರಧಾನಿ ನೆನಪಿಸಿದರು. ಆದರೆ ಪಾಕಿಸ್ತಾನ ಈ ದಿಸೆಯಲ್ಲಿ ಸಾಕಷ್ಟು ಕೆಲಸ ಮಾಡಿಲ್ಲವೆನ್ನುವುದು ನಮ್ಮ ಭಾವನೆ. ಹಫೀಜ್ ಸಯೀದ್ ರಾಜಾರೋಷವಾಗಿ ತಿರುಗುತ್ತಿದ್ದಾನೆ.
ಮೌಲಾನಾ ಅಝರ್ ಮಸೂದ್ ಮತ್ತು ಲಷ್ಕರೆ ತೊಯ್ಬಾದ ಇತರೆ ಭಯೋತ್ಪಾದಕ ಶಕ್ತಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆಂದು ಡಾ. ಸಿಂಗ್ ಹೇಳಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಂಕಲ್ಪಿಸಿರುವ ಪಾಕಿಸ್ತಾನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಬೇಕು. ಆದರೆ ಅದು ಹಾಗೆ ಸಂಭವಿಸುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.