ಬಾಂಗ್ಲಾದೇಶದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹ್ಮಾನ್ ಅವರ ಹತ್ಯೆಯಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆತಪ್ಪಿಸಿಕೊಂಡಿರುವ ಪಾತಕಿಗಳನ್ನು ಹಿಡಿಯಲು ಇಂಟರ್ಪೋಲ್ ರೆಡ್ ಅಲರ್ಟ್ ಹೊರಡಿಸಿದೆಯೆಂದು ಸುದ್ದಿವರದಿಯೊಂದು ತಿಳಿಸಿದೆ. ತಲೆತಪ್ಪಿಸಿಕೊಂಡಿರುವ ಹಂತಕರನ್ನು ಮತ್ತೆ ವಾಪಸು ಕರೆತರುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ಗೃಹಸಚಿವ ಸಹಾರಾ ಖಾಟುನ್ ತಿಳಿಸಿದ್ದಾರೆ.
ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಶೇಖ್ ಮುಜಿಬುರ್ ರೆಹ್ಮಾನ್ ಹತ್ಯೆಯಾಗಿ 34 ವರ್ಷಗಳು ಗತಿಸಿದ ಬಳಿಕ, ದೇಶದ ಸುಪ್ರೀಂಕೋರ್ಟ್ ಐವರು ಹಂತಕರಿಗೆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ಜಾರಿ ಮಾಡಿದ ಇನ್ನೂ 7 ಮಂದಿ ತಲೆತಪ್ಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬ ಜಿಂಬಾಬ್ವೆಯಲ್ಲಿ ಇತ್ತೀಚೆಗೆ ನಿಧನನಾಗಿದ್ದಾನೆಂದು ವಿದೇಶಾಂಗ ಕಚೇರಿ ದೃಢಪಡಿಸಿದೆ.
12 ಜನ ಹಂತಕರಿಗೆ 1998ರಲ್ಲಿ ಕೆಳಕೋರ್ಟ್ ವಿಧಿಸಿದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಸರ್ಕಾರವು ತಲೆತಪ್ಪಿಸಿಕೊಂಡಿರುವ ಹಂತಕರನ್ನು ವಾಪಸು ತರಲು ನೆರವು ನೀಡಬೇಕೆಂದು ಸರ್ಕಾರ ಎಲ್ಲ ರಾಷ್ಟ್ರಗಳಿಗೆ ಪತ್ರ ಕಳಿಸುತ್ತದೆಯೆಂದು ಗೃಹಸಚಿವರು ತಿಳಿಸಿದರು. 6 ಮಂದಿ ಹಂತಕರು ವಜಾಗೊಂಡ ಲೆ.ಕರ್ನಲ್ ಅಬ್ದುರ್ ರಷೀದ್, ಶರೀಫುಲ್ ಹಕ್ ದಲೀಂ, ನೂರ್ ಚೌಧರಿ, ರಶೀದ್ ಚೌಧುರಿ, ಕ್ಯಾಪ್ಟನ್ ಮಜೇದ್ ಮತ್ತು ರಿಸಾಲ್ಡರ್ ಮೊಸ್ಲೆಂ ಉದ್ದಿನ್. ಲಿಬ್ಯಾ, ಅಮೆರಿಕ, ಕೆನಡಾ, ಪಾಕಿಸ್ತಾನ ಮತ್ತು ಕೀನ್ಯಾದಲ್ಲಿ 12 ಹಂತಕರ ಪೈಕಿ 6 ಮಂದಿ ತಪ್ಪಿಸಿಕೊಂಡಿದ್ದು, ಜಿಂಬಾಬ್ವೆಯಲ್ಲಿ ಒಬ್ಬ ಸತ್ತಿದ್ದಾನೆ.
ಬಂಗಬಂಧು ಎಂದೇ ಖ್ಯಾತರಾದ ಶೇಖ್ ಮುಜಿಬ್ ಅವರನ್ನು ಧನಮಂಡಿ ಪ್ರದೇಶದಲ್ಲಿ ಅವರ ನಿವಾಸದಲ್ಲಿ ಅವರ ಪತ್ನಿ ಮತ್ತು ಮೂವರು ಪುತ್ರರ ಜತೆ ಕ್ಷಿಪ್ರಕ್ರಾಂತಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶೇಖ್ ಹಸೀನಾ ಅವರು ವಿದೇಶದಲ್ಲಿದ್ದರಿಂದ ಅಪಾಯದಿಂದ ಪಾರಾಗಿದ್ದರು.