ಭಾರತದ ಆರ್ಥಿಕ ಚಟುವಟಿಕೆಯ ಕೇಂದ್ರ ಮುಂಬೈನಲ್ಲಿ ಭಯೋತ್ಪಾದನೆ ದಾಳಿಗಳಿಂದ ಮೃತಪಟ್ಟ ದುರ್ದೈವಿಗಳು ಮತ್ತು ಗಾಯಗೊಂಡವರ ಬಂಧುಗಳು ನ್ಯಾಯಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಆದರೆ ಹತ್ಯಾಕಾಂಡದ ಹಿಂದೆ ಕೈವಾಡ ನಡೆಸಿದ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳು ಇನ್ನೂ ಜೀವಂತವಾಗಿ ಉಳಿದಿದ್ದು, ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಭಾರತವು ಪಾಕಿಸ್ತಾನ ಮೂಲದ ಲಷ್ಕರೆ ತೊಯ್ಬಾ ಮತ್ತು ಅದರ ರಾಜಕೀಯ ಅಂಗವಾದ ಜಮಾತ್ ಉದ್ ದವಾ ವಿರುದ್ಧ ಬೆಟ್ಟು ತೋರಿಸಿದೆ. ಆದರೆ ಪಾಕಿಸ್ತಾನದ ಅರೆ ಮನಸ್ಸಿನ ಕ್ರಮದಿಂದ ಎರಡೂ ಸಂಘಟನೆಗಳು ತಮ್ಮ ಮೂಲಸೌಲಭ್ಯ ಮತ್ತು ಸಂಪನ್ಮೂಲಗಳನ್ನು ಸುಸ್ಥಿರವಾಗಿ ಇಟ್ಟುಕೊಳ್ಳಲು ಯಶಸ್ವಿಯಾಗಿವೆ.ದೇವರಿಗೆ ಧನ್ಯವಾದ, ನಾವು ಚೆನ್ನಾಗಿದ್ದೇವೆ ಎಂದು ಜೆಯುಡಿ ನಾಯಕನೊಬ್ಬ ಡಿಪಿಎ ಜತೆ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾನೆ.
ನಾವು ಸಂಯಮ ಕಾಯ್ದುಕೊಂಡಿದ್ದರಿಂದ ಒಳ್ಳೆಯದಾಗುತ್ತಿದೆಯೆಂದು ಅವನು ಉದ್ಗರಿಸಿದ್ದಾನೆ. ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಪಾಕಿಸ್ತಾನಿ ಮೂಲದ ಉಗ್ರರ ಪಾತ್ರವನ್ನು ಮೊದಲಿಗೆ ನಿರಾಕರಿಸಿದ್ದ ಪಾಕಿಸ್ತಾನ ಜೆಯುಡಿಯನ್ನು ಭಯೋತ್ಪಾದನೆ ಸಂಘಟನೆಗಳ ಪಟ್ಟಿಯಲ್ಲಿ ವಿಶ್ವಸಂಸ್ಥೆ ಇರಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಿತ್ತು.
ಜೆಯುಡಿಯ ಮುಖ್ಯಕಚೇರಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ಪಾಕಿಸ್ತಾನ ನೂರಾರು ಕಾರ್ಯಕರ್ತರನ್ನು ಬಂಧಿಸಿ, ಹತ್ತಾರು ಕಚೇರಿಗಳಿಗೆ ಬೀಗಮುದ್ರೆ ಹಾಕಿ ಅದು ನಡೆಸುತ್ತಿದ್ದ ಪತ್ರಿಕೆಗಳಿಗೆ ನಿಷೇಧ ವಿಧಿಸಿತ್ತು. ಆದರೆ ಕೇವಲ ಒಂದು ವರ್ಷ ಕಳೆಯುವಷ್ಟರಲ್ಲೇ ಇವೆಲ್ಲಾ ತಿರುಗುಮುರುಗಾಗಿದೆ. ಜೆಯುಡಿಯ ಫಲಾ-ಎ-ಇನ್ಸಾನಿಯಟ್ ಪ್ರತಿಷ್ಠಾನ ಎಂಬ ಹೆಸರಿನಲ್ಲಿ ಮರುಜನ್ಮ ಪಡೆದಿದೆ.
ಜೆಯುಡಿಯ ವಾರಪತ್ರಿಕೆ ಘಜವಾ ಈಗ ಜರಾರ್ ಎಂಬ ಹೊಸ ಶಿರೋನಾಮೆಯಿಂದ ಅಂಗಡಿಗಳಲ್ಲಿ ರಾರಾಜಿಸುತ್ತಿದ್ದು, ಪಶ್ಚಿಮ ರಾಷ್ಟ್ರಗಳು ಮತ್ತು ಭಾರತದ ವಿರುದ್ಧ ದ್ವೇಷದ ಬೀಜ ಬಿತ್ತುತ್ತಿದೆ. ಉಳಿದ ಪ್ರಕಟಣೆಗಳು ಕೂಡ ಬೇರೆ ಶೀರ್ಷಿಕೆಗಳೊಂದಿಗೆ ಮರುಹುಟ್ಟು ಪಡೆದಿವೆ.