ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಕೈವಾಡ ನಡೆಸಿದ ಮುಖ್ಯ ಸೂತ್ರಧಾರ, ಲಷ್ಕರೆ ತೊಯ್ಬಾ ಕಾರ್ಯಾಚರಣೆ ಕಮಾಂಡರ್ ಜಾಕಿವುರ್ ರೆಹ್ಮಾನ್ ಲಖ್ವಿ ಮತ್ತು ಘೋಷಿತ ಅಪರಾಧಿ ಅಜ್ಮಲ್ ಅಮಿರ್ ಕಸಬ್ ಸೇರಿದಂತೆ ಇನ್ನೂ 6 ಜನ ಆರೋಪಿಗಳ ವಿರುದ್ಧ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕೋರ್ಟ್ ದೋಷಾರೋಪ ಹೊರಿಸಿದೆ.
ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಮಲಿಕ್ ಮಹಮದ್ ಅಕ್ರಂ ಅವಾನ್, ಏಳು ಮಂದಿ ಶಂಕಿತ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದಾಗ, ಆರೋಪಿಗಳು ಪ್ರತಿಭಟನೆ ವ್ಯಕ್ತಪಡಿಸಿದರೆಂದು ಮೂಲಗಳು ಹೇಳಿವೆ. ಕೆಲವು ಆರೋಪಿಗಳ ಜಾಮೀನು ಕೋರಿಕೆ ಅರ್ಜಿಗಳನ್ನು ನ್ಯಾಯಾಧೀಶರು ತಿರಸ್ಕರಿಸಿದರು.
ಘೋಷಿತ ಅಪರಾಧಿಗಳ ಪಟ್ಟಿಯಲ್ಲಿ ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕಾಂಗಿ ಭಯೋತ್ಪಾದಕ ಕಸಬ್ ಮತ್ತು ದಾಳಿಕೋರರು ಬಳಸಿದ ಎರಡು ದೋಣಿಗಳ ಸಿಬ್ಬಂದಿ ಸೇರಿದ್ದಾರೆಂದು ಮೂಲಗಳು ತಿಳಿಸಿವೆ. ಮುಂಬೈ ಭಯೋತ್ಪಾದನೆ ದಾಳಿ ನಡೆದ ಮೊದಲ ವಾರ್ಷಿಕದ ಹಿನ್ನೆಲೆಯಲ್ಲಿ ಏಳು ಮಂದಿ ಶಂಕಿತರ ವಿರುದ್ಧ ದೋಷಾರೋಪವನ್ನು ಪಾಕಿಸ್ತಾನ ಕೋರ್ಟ್ ಹೊರಿಸಿದೆ.ಸೋಮವಾರ ನಡೆದ ವಿಚಾರಣೆ ವೇಳೆಯಲ್ಲಿ ಏಳು ಶಂಕಿತರ ಪರ ವಕೀಲರು ಕಸಬ್ನನ್ನು ವಿಚಾರಣೆ ಎದುರಿಸಲು ಪಾಕಿಸ್ತಾನಕ್ಕೆ ಕರತರಬೇಕೆಂದು ಒತ್ತಾಯಿಸಿದರು.
ಕಸಬ್ ಬದುಕುಳಿದ ಏಕೈಕ ಭಯೋತ್ಪಾದಕ ಮತ್ತು ಭಾರತದ ಕೋರ್ಟ್ಗೆ ಅವನ ತಪ್ಪೊಪ್ಪಿಗೆಯ ಆಧಾರದ ಮೇಲೆ ಪಾಕಿಸ್ತಾನ ಆಡಳಿತ ನಮ್ಮ ಕಕ್ಷಿದಾರರ ವಿರುದ್ಧ ಕೇಸು ದಾಖಲಿಸಿರುವುದರಿಂದ, ವಿಚಾರಣೆ ಎದುರಿಸಲು ಅವನನ್ನು ಪಾಕಿಸ್ತಾನಕ್ಕೆ ತರಬೇಕು ಎಂದು ವಕೀಲರು ಆಗ್ರಹಿಸಿದರು.