ಭಾರತ-ಅಮೆರಿಕ ನಡುವೆ ಬಾಂಧವ್ಯದಲ್ಲಿ ಆರ್ಥಿಕತೆ, ಇಂಧನ, ಪರಿಸರ, ಶಿಕ್ಷಣ ಮತ್ತು ಉನ್ನತಾಧಿಕಾರ ಈ ಕ್ಷೇತ್ರಗಳಿಗೆ ಹೊಸ ಮಹತ್ವ ನೀಡುವುದಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ಭಾಂಧವ್ಯವನ್ನು ಕ್ರೋಢೀಕರಿಸಲಾಗುವುದು ಎಂದು ಸಿಂಗ್ ಹೇಳಿದರು.
ಅಮೆರಿಕಕ್ಕೆ ಭಾರತದ ರಾಯಭಾರಿ ಮೀರಾ ಶಂಕರ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾರತೀಯ ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್ ಅವರು, ನಮ್ಮ ಬಾಂಧವ್ಯವು ಜಾಗತಿಕ ಆಯಾಮದ ಬಲಿಷ್ಠ ಆಯಕಟ್ಟಿನ ಸಹಯೋಗದಲ್ಲಿ ಪಕ್ವವಾಗುವ ಸಂದರ್ಭದಲ್ಲಿ ನಾವು ಭೇಟಿಯಾಗಿದ್ದೇವೆ ಎಂದು ನುಡಿದರು.ವಿಶಾಲ ವ್ಯಾಪ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ನಾವು ಒಳ್ಳೆಯ ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಬಾಂಧವ್ಯದ ಕ್ರೋಢೀಕರಣಕ್ಕೆ ಅಡಿಪಾಯ ಹಾಕಿದ್ದೇವೆ. ಮುಂದಿನ ಹಂತದ ಬಾಂಧವ್ಯದಲ್ಲಿ ಹೊಸ ಮಾರ್ಗಗಳನ್ನು ಸ್ಥಾಪಿಸುತ್ತಿದ್ದು, 21ನೇ ಶತಮಾನದ ಸವಾಲುಗಳನ್ನು ಪೂರೈಸಲು ಸಾಧ್ಯವಾಗುತ್ತದೆಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಎಕಾನಮಿ, ಎನರ್ಜಿ, ಎನ್ವೈರಾನ್ಮೆಂಟ್ ಮತ್ತು ಎಂಪವರ್ಮೆಂಟ್ ಹೀಗೆ ಐದು 'ಈ'ಗಳನ್ನು ಕುರಿತು ನಮ್ಮ ಬಾಂಧವ್ಯ ಹೊಸ ಮಹತ್ವ ಪಡೆದಿದೆ. ನಾವು ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ನುಡಿದರು.