ಇಸ್ಲಾಮಾಬಾದ್, ಗುರುವಾರ, 26 ನವೆಂಬರ್ 2009( 17:57 IST )
ಮುಂಬೈ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯ ಕಿಡಿ ಸ್ಫೋಟಿಸುವುದಕ್ಕಾಗಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಕಯಾನಿ ಅವರಿಗೆ ಪಾಕಿಸ್ತಾನದ ಬಂಧಿತ ಉಗ್ರಗಾಮಿಯೊಬ್ಬ ಹುಸಿ ಕರೆಗಳನ್ನು ಮಾಡಿದ್ದ ಸಂಗತಿ ಬಯಲಾಗಿದೆ.
1999ರಲ್ಲಿ ಐಸಿ-184 ವಿಮಾನದ ಪ್ರಯಾಣಿಕರಿಗೆ ಬದಲಿಯಾಗಿ ಬಿಡುಗಡೆಯಾಗಿದ್ದ ಓಮರ್ ಸಯೀದ್ ಶೇಖ್ ಈ ಹುಸಿ ಕರೆಗಳನ್ನು ಮಾಡಿದ್ದನೆಂದು ತನಿಖೆದಾರರು ತಿಳಿಸಿದ್ದಾರೆಂದು ಡಾನ್ ವರದಿ ಮಾಡಿದೆ. ಪಾಕಿಸ್ತಾನದ ಸರ್ಕಾರಿ ಮತ್ತು ಮಿಲಿಟರಿ ನಾಯಕತ್ವಕ್ಕೆ ಅವನು ದೂರವಾಣಿ ಮೂಲಕ ಹುಸಿ ಬೆದರಿಕೆ ಕರೆಗಳನ್ನು ಮಾಡಿದ್ದರಿಂದ ಭಾರತ-ಪಾಕ್ ನಡುವೆ ಉದ್ವಿಗ್ನ ಸ್ಥಿತಿ ಸ್ಫೋಟಿಸಿತ್ತು.
ಹೈದರಾಬಾದ್ ಜೈಲಿನಲ್ಲಿ ಬಂಧಿತನಾಗಿದ್ದ ಅವನು ಭಾರತದ ವಿದೇಶಾಂಗ ಸಚಿವರೆಂದು ಹೇಳಿಕೊಂಡು ಜರ್ದಾರಿಗೆ ಕರೆ ಮಾಡಿ ಮುಂಬೈ ದಾಳಿ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ಯುದ್ಧ ಹೂಡುವುದಾಗಿ ಬೆದರಿಕೆ ಹಾಕಿದ ಬಳಿಕ ಪಾಕಿಸ್ತಾನ ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು. ಓಮರ್ ಶೇಖ್ ಪತ್ನಿ ಸಾಡಿಯ ಓಮರ್ ಹೈದರಾಬಾದ್ ಜೈಲಿನಲ್ಲಿ ಬಂಧಿತನಾಗಿದ್ದ ತನ್ನ ಪತಿಗೆ ಮುಂಬೈ ದಾಳಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಳು.
ಗೋಪ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದ ಓಮರ್ ಸಯೀದ್ ಷೇಕ್, ಆಗಿನ ಭಾರತದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರಿಗೆ ಬ್ರಿಟಿಷ್ ಸಿಮ್ ಕಾರ್ಡ್ ಬಳಸಿ ಕರೆ ಮಾಡಿದ್ದ. ಮುಖರ್ಜಿ ಕರೆಗಳನ್ನು ನಿಭಾಯಿಸುತ್ತಿದ್ದ ನಿರ್ವಾಹಕನಿಗೆ ತಾನು ಪಾಕಿಸ್ತಾನ ಅಧ್ಯಕ್ಷರೆಂದು ಶೇಖ್ ಹೇಳಿಕೊಂಡಿದ್ದ. ಆದರೆ ಭಾರತದ ವಿದೇಶಾಂಗ ಸಚಿವರು ಶೀಘ್ರದಲ್ಲೇ ಸಂಪರ್ಕಕ್ಕೆ ಸಿಗುತ್ತಾರೆಂದು ತಿಳಿಸಲಾಯಿತೇ ಹೊರತು ಮುಖರ್ಜಿ ಜತೆ ಮಾತನಾಡಲಾಗಲಿಲ್ಲ,
ಬಳಿಕ ಓಮರ್ ಸಯೀದ್ ಶೇಖ್ ಅಧ್ಯಕ್ಷ ಜರ್ದಾರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರಿಗೆ ಕರೆ ಮಾಡಿದ. ಶೇಖ್ ಅಮೆರಿಕದ ಆಗಿನ ವಿದೇಶಾಂಗ ಕಾರ್ಯದರ್ಶಿ ಕಂಡೋಲಿಜಾ ರೈಸ್ ಅವರಿಗೆ ಕೂಡ ಕರೆ ಮಾಡಲು ಪ್ರಯತ್ನಿಸಿದ.ವಾಷಿಂಗ್ಟನ್, ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವೆ ಉದ್ವಿಗ್ನತೆ ಶಮನಕ್ಕೆ ಬಿರುಸಿನ ದೂರವಾಣಿ ಕರೆಗಳು ವಿನಿಮಯವಾಯಿತು.
ನ.29ರ ಸಂಜೆ ಶಾಂತ ಸ್ಥಿತಿ ಮರುಸ್ಥಾಪನೆಯಾಗಿತ್ತು.ಐಸಿ-184 ಒತ್ತೆಯಾಳು ನಾಟಕದಲ್ಲಿ ಭಾರತ ಬಿಡುಗಡೆ ಮಾಡಿದ ಉಗ್ರಗಾಮಿಗಳ ಪೈಕಿ ಶೇಖ್ ಕೂಡ ಸೇರಿದ್ದ. ಅವನ ಬಿಡುಗಡೆ ಬಳಿಕ, ಲಖ್ವಿ ಸೇರಿದಂತೆ ಲಷ್ಕರೆ ನಾಯಕರ ಜತೆ ನಿಕಟ ಸಂಬಂಧ ಇರಿಸಿಕೊಂಡಿದ್ದ. 2002ರಲ್ಲಿ ಅಮೆರಿಕದ ಪತ್ರಕರ್ತ ಡೇವಿಡ್ ಪರ್ಲ್ ಹತ್ಯೆಗೆ ಸಂಬಂಧಿಸಿದಂತೆ ಅವನನ್ನು ಬಂಧಿಸಲಾಗಿತ್ತು.