ಪೋರ್ಟ್ ಆಫ್ ಸ್ಪೇನ್, ಶನಿವಾರ, 28 ನವೆಂಬರ್ 2009( 10:29 IST )
ಭಾರತ ಸಮೀಪ ದೃಷ್ಟಿದೋಷ ಬಂದವರ ರೀತಿ ವರ್ತಿಸಬಾರದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ ಭಾರತಕ್ಕೆ ಕಟುವಾದ ಮಾತುಗಳಲ್ಲಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ 26/11 ಮುಂಬೈ ಭಯೋತ್ಪಾದನೆ ದಾಳಿಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಕಷ್ಟು ಸಾಕ್ಷ್ಯಾಧಾರವಿದ್ದರೂ, ಲಷ್ಕರೆ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಸಾಕ್ಷ್ಯಾಧಾರ ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
ಪೋರ್ಟ್ ಆಫ್ ಸ್ಪೇನ್ನ ಕಾಮನ್ವೆಲ್ತ್ ಸರ್ಕಾರಿ ಮುಖ್ಯಸ್ಥರ ಸಭೆಯಲ್ಲಿ ಭಾರತದ ಜತೆ ಯಾವುದೇ ಮಾತುಕತೆಯನ್ನು ಖುರೇಷಿ ತಳ್ಳಿಹಾಕಿದ್ದಾರೆ. ಸಿಎನ್ಎನ್-ಐಬಿಎನ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಖುರೇಷಿ, ಭಾರತ ಪ್ರತಿಸ್ಪಂದಿಸಿದರೆ ಮಾತ್ರ ಭಾರತ-ಪಾಕ್ ಶಾಂತಿ ಪ್ರಕ್ರಿಯೆ ಮುಂದುವರಿಯುತ್ತದೆಂದು ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ನಿಜವಾದ ಪ್ರಗತಿ ಇರಬೇಕು ಎಂದು ಖುರೇಷಿ ಭಾರತವನ್ನು ಟೀಕಿಸುತ್ತಾ ಮಾರ್ಮಿಕವಾಗಿ ಹೇಳಿದರು.ಪಾಕಿಸ್ತಾನ ಹಿಂಸಾಚಾರ ತ್ಯಜಿಸಿದರೆ ಅದರ ಜತೆ ಮಾತುಕತೆಗೆ ಅರ್ಧದಾರಿಯನ್ನು ನಾವು ಕ್ರಮಿಸಿದ ಹಾಗೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜಮ್ಮುಕಾಶ್ಮೀರದಲ್ಲಿ ಹೇಳಿಕೆ ನೀಡಿರುವ ಕುರಿತು ಅವರನ್ನು ಪ್ರಶ್ನಿಸಿದಾಗ,' ನಾವು ಹಳೆಯ ಮನಸ್ಥಿತಿಯಿಂದ ಹೊರಬರಬೇಕು.
ನಮ್ಮ ದಾರಿಯಲ್ಲಿ ದೊಡ್ಡ ಅವಕಾಶ ಬರುತ್ತಿದೆಯೆಂದು ತಿಳಿಯಬೇಕು. ನೀವು ಮಾತುಕತೆಯನ್ನು ಸೀಮಿತಗೊಳಿಸಿದರೆ ಅದು ಪಾಕಿಸ್ತಾನಕ್ಕೆ ಸ್ವೀಕಾರಾರ್ಹವಲ್ಲ. ಆದರೆ ನೀವು ಸಮೀಪ ದೃಷ್ಟಿದೋಷ ಹೊಂದಿದವರಂತೆ ಕಾಣುತ್ತೀರಿ. ನೀವು ತುಂಬ ಸಂಕುಚಿತ ಮನೋಭಾವದವರಾಗಿದ್ದೀರಿ, ವಿಶಾಲ ಚಿತ್ರಣದ ಕಡೆ ನೀವು ನೋಡಬೇಕು. ವಿಶಾಲ ಚಿತ್ರವು ಸಹಕಾರವನ್ನು ಬಯಸುತ್ತದಲ್ಲದೇ ಸಂಘರ್ಷವಲ್ಲ 'ಎಂದು ಖುರೇಷಿ ಹೇಳಿದ್ದಾರೆ.