ಪೋರ್ಟ್ ಆಫ್ ಸ್ಪೇನ್, ಶನಿವಾರ, 28 ನವೆಂಬರ್ 2009( 15:50 IST )
ಕೋಫೆನ್ಹ್ಯಾಗನ್ ಹವಾಮಾನ ವೈಪರೀತ್ಯ ಸಭೆಯಲ್ಲಿ ಕಾನೂನುಬದ್ಧ ನೈಜ ಫಲಿತಾಂಶಕ್ಕಾಗಿ ಒತ್ತಡ ಹಾಕಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಸಮಾನವಾದ ಹೊರೆ ಹಂಚಿಕೊಳ್ಳುವ ನಮೂನೆ ಜತೆಯಲ್ಲಿದ್ದರೆ ಇಂಗಾಲ ಹೊರಸೂಸುವಿಕೆ ಕುರಿತ ಜಾಗತಿಕ ಗುರಿಗೆ ಸಹಿ ಹಾಕಲು ಬಯಸುವುದಾಗಿ ಷರತ್ತು ವಿಧಿಸಿದ್ದಾರೆ. ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು, ಸಂಪನ್ಮೂಲ ಮತ್ತು ಸೂಕ್ತ ತಂತ್ರಜ್ಞಾನಗಳನ್ನು ಒದಗಿಸಬೇಕೆಂದು ಪ್ರಧಾನಿ ಇದಕ್ಕೆ ಮುಂಚೆ ಒತ್ತಾಯಿಸಿದ್ದರು.
ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರುಮನೆ ಅನಿಲ ಹೊರಸೂಸುವಿಕೆ ಕುರಿತು ಕ್ಯೊಟೊ ಶಿಷ್ಟಾಚಾರವನ್ನು ಬದಿಗಿಡುವ ಯತ್ನಗಳನ್ನು ಅವರು ಖಂಡಿಸಿದರು. ಹವಾಮಾನ ವೈಪರೀತ್ಯವು ಹಸಿರು ಹಣೆಪಟ್ಟಿಯ ಅಡಿಯಲ್ಲಿ ರಕ್ಷಣಾತ್ಮಕ ನೀತಿಗಳನ್ನು ಅನುಸರಿಸಲು ಒಂದು ನೆಪವಾಗುತ್ತಿದೆಯೆಂದು ಅವರು ಹೇಳಿದ್ದಾರೆ.ಕಾಮನ್ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಕಟುವಾಗಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಕುರಿತ ಜಾಗತಿಕ ಚರ್ಚೆಯು ಆರ್ಥಿಕ ಪೈಪೋಟಿಯನ್ನು ಕಾಯ್ದುಕೊಳ್ಳುವ ವಾದಗಳಿಂದ ಕೂಡಿದ್ದು ದುರದೃಷ್ಟಕರ ಎಂದು ವಿಷಾದಿಸಿದರು.
ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ವೈಪರೀತ್ಯ ಕುರಿತ ಡಿಸೆಂಬರ್ ಶೃಂಗಸಭೆಯ ನಿರೀಕ್ಷೆಗಳನ್ನು ತಗ್ಗಿಸುವ ಯತ್ನವನ್ನು ಸಿಂಗ್ ಖಂಡಿಸಿದರು. ಕೊಫೆನ್ಹ್ಯಾಗನ್ ಫಲಶ್ರುತಿಯು ಆರ್ಥಿಕತೆ, ತಂತ್ರಜ್ಞಾನ, ಹೊಂದಾಣಿಕೆ ಮುಂತಾದುವಕ್ಕೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ ಚೌಕಟ್ಟಿನ ಅನುಷ್ಠಾನ ಹೆಚ್ಚುವ ಬದಲಿಗೆ ಕುಗ್ಗಿದರೆ ಅದು ಗಂಭೀರ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.