ಬೂನಸ್ ಐರಿಸ್: ಅರ್ಜೆಂಟೀನಾ ರಾಜಕಾರಣಿಗಳೂ ಬೀದಿ ಜಗಳ ಮಾಡುತ್ತಾರೆ ಎಂದು ಹೇಳುತ್ತಾ ತಮ್ಮ ಜಗಳವನ್ನು ಭಾರತೀಯ ರಾಜಕಾರಣಿಗಳು ಸಮರ್ಥಿಸಿಕೊಳ್ಳಲು ಕಾರಣ ಸಿಕ್ಕಿದೆ.
ಅರ್ಜೆಂಟೀನಾದ ಉತ್ತರ ಪ್ರಾಂತದ ಕೆಳಮನೆಯ ಅಧ್ಯಕ್ಷರ ಆಯ್ಕೆಯ ಕುರಿತು ಉಂಟಾದ ಮಾತಿನ ಚಕಮಕಿ ಪರಸ್ಪರ ಕುರ್ಚಿಗಳನ್ನು ಎಸೆದುಕೊಳ್ಳುವವರೆಗೂ ಮುಂದುವರಿದಿತ್ತು. ಇದರಿಂದಾಗಿ ಶಾಸನ ಸಭೆಯ ಹಲವು ಸದಸ್ಯರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ರಾಷ್ಟ್ರ ರಾಜಧಾನಿ ಬೂನಸ್ ಐರಿಸ್ನಿಂದ ಉತ್ತರಕ್ಕೆ ಸುಮಾರು ಒಂದು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚಾಕೋ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಟ 10 ಮಂದಿ ಶಾಸಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಸದನದ ಹಿಂಸಾಚಾರಕ್ಕೆ ಚಾಕೋ ಪ್ರಾಂತದ ರಾಜ್ಯಪಾಲ ಜಾರ್ಜ್ ಕ್ಯಾಪಿಟನಿಚ್ ವಿಷಾದ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ಶಾಸಕರು ಶಾಸಕಾಂಗ ಸಭೆಗೆ ನುಗ್ಗುವುದನ್ನು ತಪ್ಪಿಸಲು ಆಡಳಿತ ಪಕ್ಷದ ಅಧಿಕಾರಿಗಳು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎಂದು ಮೂಲಗಳು ತಿಳಿಸಿದ್ದು, ಶಾಸಕರು ಪರಸ್ಪರ ಪ್ಲಾಸ್ಟಿಕ್ ಕುರ್ಚಿಗಳನ್ನು ಎಸೆಯುವುದು, ತಳ್ಳುವುದು ಮತ್ತು ಅರಚುತ್ತಿದ್ದ ವೀಡಿಯೋಗಳನ್ನು ಸ್ಥಳೀಯ ಟೀವಿ ಚಾನೆಲ್ಗಳೂ ಪ್ರಸಾರ ಮಾಡುವ ಮೂಲಕ ಜನತೆಯಲ್ಲಿ ಆತಂಕವನ್ನು ಹುಟ್ಟಿಸಿದ್ದವು.