ರಾವಲ್ಪಿಂಡಿ , ಗುರುವಾರ, 3 ಡಿಸೆಂಬರ್ 2009( 14:58 IST )
ಮುಂಬೈಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತಾವು ಭಾಗಿಯಾಗಿದ್ದೇವೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಲಷ್ಕರ್-ಎ.ತೊಯಿಬಾ ಮುಖ್ಯಸ್ಥ ಜಾಕೀರ್ ಉರ್ ರೆಹ್ಮಾನ್ ಲಕ್ವಿ, ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
ಲಾಹೋರ್ ಹೈಕೋರ್ಟ್ನಲ್ಲಿ ಲಕ್ವಿ ಎರಡು ಮನವಿ ಅರ್ಜಿಗಳನ್ನು ಸಲ್ಲಿಸಿದ್ದು, ಮುಂಬೈಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತಾನು ಭಾಗಿಯಾಗಿದ್ದೇನೆ ಎನ್ನುವದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಲಿ ಅಥವಾ ಸಾಕ್ಷಾಧಾರಗಳಾಗಲಿ ಇಲ್ಲ. ತಮ್ಮನ್ನು ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೊದಲನೇ ಅರ್ಜಿಯ ಪ್ರಕಾರ,ಮುಂಬೈ ಉಗ್ರರ ದಾಳಿಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಅಜ್ಮಲ್ ಕಸಬ್ ಹೊರತುಪಡಿಸಿ ಯಾವುದೇ ಸಾಕ್ಷಾಧಾರಗಳಿಲ್ಲವೆಂದು ನ್ಯಾಯಾಲಯಕ್ಕೆ ಲಕ್ವಿ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಕಾನೂನಿನ ಪ್ರಕಾರ ಇಸ್ಲಾಮಾಬಾದ್ನಲ್ಲಿ ನೋಂದಣಿಯಾದ ಪ್ರಕರಣದಲ್ಲಿ ಭಾರತದ ಅಧಿಕಾರಿಗಳ ಮುಂದೆ ನೀಡಿದ ಕಸಬ್ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ.
ಪಾಕಿಸ್ತಾನ ಸರಕಾರ, ನವೆಂಬರ್ 25 ರಂದು ಮುಂಬೈ ದಾಳಿಯ ಪ್ರಮುಖ ರೂವಾರಿ ಲಕ್ವಿ ಮತ್ತು ಇತರ ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.