ಹವಾಮಾನ ಬದಲಾವಣೆಯಿಂದಾಗಿ ಹಿಮರಾಶಿ ಕರಗಿ ನದಿಗಳ ಪ್ರವಾಹ ಹೆಚ್ಚುತ್ತಿರುವುದು ಭಾರತ, ಚೀನಾ ಮತ್ತು ಪಾಕಿಸ್ತಾನ ದೇಶಗಳ ಕೃಷಿ ಮತ್ತು ಅಭಿವೃದ್ಧಿಗೆ ಯಾವ ರೀತಿ ತೊಂದರೆಯಾಗುತ್ತದೆ ಎನ್ನುವ ಬಗ್ಗೆ ಜಾಗತಿಕ ಎಚ್ಚರಿಕೆ ಮೂಡಿಸಲು ಮೌಂಟ್ ಎವರೆಸ್ಟ್ ಅಡಿಯಲ್ಲಿ ನೇಪಾಳಿ ಸಚಿವರುಗಳ ಸಭೆ ನಡೆಯಲಿದೆ.
ಪ್ರಧಾನಮಂತ್ರಿ ಮಾಧವ ಕುಮಾರ್ ನೇಪಾಳ ನೇತೃತ್ವದಲ್ಲಿ 20 ಸಚಿವರು ಹಾಗೂ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಮೌಂಟ್ ಎವರೆಸ್ಟ್ ಅಡಿಯಲ್ಲಿರುವ ಲುಕ್ಲಾ ಪ್ರದೇಶಕ್ಕೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೌಂಟ್ ಎವರೆಸ್ಟ್ ಅಡಿಯಲ್ಲಿರುವ ಕಾಲಾಪತ್ತರ್ ಸಮುದ್ರಮಟ್ಟದಿಂದ 5,240 ಮೀಟರ್ ಎತ್ತರದಲ್ಲಿದ್ದು,20 ನಿಮಿಷಗಳ ಅವಧಿಯವರೆಗೆ ಸಭೆ ನಡೆಯಲಿದೆ.
ಏತನ್ಮಧ್ಯೆ, ಅನಾರೋಗ್ಯದ ಸಮಸ್ಯೆಗಳಿಂದಾಗಿ ಸಭೆಗೆ ತೆರಳದಂತೆ ಕೆಲ ಸಚಿವರುಗಳಿಗೆ ವೈದ್ಯರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸಚಿವರ ಗೈರುಹಾಜರಿಗೆ ವಿವರಣೆ ನೀಡಿದ್ದಾರೆ.
ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ ಪರಿಸರವನ್ನು ಕಾಪಾಡಲು ತೆಗೆದುಕೊಳ್ಳುವ ಕ್ರಮಗಳ ಕುರಿತಂತೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
ನೇಪಾಳ ಪ್ರಧಾನಿ ಮಾಧವ ಕುಮಾರ್ ನೇಪಾಳ ಹವಾಮಾನ ಬದಲಾವಣೆ ಕುರಿತಂತೆ ಡೆನ್ಮಾರ್ಕ್ನ ಕೂಪನ್ಹಗೇನ್ನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.