ಇಸ್ಲಾಮಾಬಾದ್ , ಶುಕ್ರವಾರ, 4 ಡಿಸೆಂಬರ್ 2009( 15:23 IST )
ಭಾರತ ಹೊಣೆಗಾರಿಕೆಯಿಂದ ವರ್ತಿಸಬೇಕಾಗಿದೆ.ಮತ್ತು ನಕಾರಾತ್ಮಕತೆ ತೋರಿದಲ್ಲಿ, ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆ ಮುಂದುವರಿಕೆಯಲ್ಲಿ ಆಸಕ್ತಿ ಕಳೆದುಹೋಗುತ್ತದೆ ಎಂದು ಪಾಕಿಸ್ತಾನ ಭಾರತಕ್ಕೆ ಬುದ್ದಿವಾದ ಹೇಳಿದೆ.
ನಾವು ಭಯೋತ್ಪಾದಕರ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ.ಪ್ರಾದೇಶಿಕ ರಾಷ್ಟ್ರಗಳ ಬೆಂಬಲ ಅಗತ್ಯವಾಗಿದೆ. ಭಾರತ ಮಹತ್ವದ ರಾಷ್ಟ್ರವಾಗಿರುವುದರಿಂದ ಹೊಣೆಗಾರಿಕೆಯಿಂದ ವರ್ತಿಸಬೇಕಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.
ಮುಂಬೈ ದಾಳಿಗೆ ಕಾರಣರಾದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆಯಿಲ್ಲ ಎನ್ನುವ ಭಾರತದ ಹೇಳಿಕೆಗೆ ಉತ್ತರಿಸಿದ ಖುರೇಷಿ, ಭಾರತ ಒಂದೇ ನಿಲುವಿಗೆ ಅಂಟಿಕೊಳ್ಳುವುದು ಸರಿಯಲ್ಲ ವೆಂದು ತಿಳಿಸಿದ್ದಾರೆ.
ಭಾರತ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ. ನಕಾರಾತ್ಮಕವಾಗಿ ವರ್ತಿಸಿದಲ್ಲಿ ಮುಂಬೈ ದಾಳಿ ಪ್ರಕರಣದ ತನಿಖೆಗೆ ಪಾಕಿಸ್ತಾನಕ್ಕೆ ಸಹಾಯ ನೀಡಿದಂತಾಗುವದಿಲ್ಲವೆಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ನಡೆದ ಸಭೆಯನ್ನು ನೆನಪಿಸಿದ ಖುರೇಷಿ, ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಿದ ನಂತರ ತಮ್ಮೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಮಹತ್ವದ ಬೆಳವಣಿಗೆಗಳು ಕಂಡುಬಂದಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.