ಇಸ್ಲಾಮಾಬಾದ್ , ಸೋಮವಾರ, 7 ಡಿಸೆಂಬರ್ 2009( 18:01 IST )
ಭ್ರಷ್ಟಾಚಾರ ಪ್ರಕರಣದಲ್ಲಿರುವ ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಇತರ 8 ಸಾವಿರ ಜನರಿಗೆ ನೀಡಿದ ಕ್ಷಮಾದಾನವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಸರಕಾರ ಮಧ್ಯೆಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರಿಗೆ ನೀಡಲಾದ ಕ್ಷಮಾದಾನ ಕುರಿತಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಸರಕಾರ ನ್ಯಾಯಾಲಯದ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲು ಬಯಸುವುದಿಲ್ಲ ಎಂದು ಅಟಾರ್ನಿ ಜನರಲ್ ಶಾ ಖಾವರ್ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಇಫ್ತೀಕಾರ್ ಚೌಧರಿ ನೇತೃತ್ವದ ಪೀಠ 17 ಮಂದಿ ನ್ಯಾಯಾಧೀಶರನ್ನು ಹೊಂದಿದ್ದು, ವಿಚಾರಣೆಯನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ ಜರ್ದಾರಿ ಹಾಗೂ ಇತರ 8ಸಾವಿರ ಜನರಿಗೆ ಎರಡು ವರ್ಷಗಳ ಹಿಂದೆ ಕ್ಷಮಾದಾನ ನೀಡಿದ್ದರು.ಸರ್ವೋಚ್ಚ ನ್ಯಾಯಾಲಯ ನೀಡಿದ ಗಡುವಿನ ಕ್ಷಮಾದಾನ ಅವಧಿ ನವೆಂಬರ್ 28ಕ್ಕೆ ಅಂತ್ಯಗೊಂಡಿತ್ತು. ಅವಧಿಯೊಳಗೆ ಸಂಸತ್ತಿನ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದ್ದರಿಂದ ನ್ಯಾಯಾಲಯದ ಮೆಟ್ಟಿಲೇರಿದೆ.
ಒಂದು ವೇಳೆ ಸರ್ವೋಚ್ಚ ನ್ಯಾಯಾಲಯ ಜರ್ದಾರಿಯವರ ಕ್ಷಮಾದಾನವನ್ನು ತಳ್ಳಿಹಾಕಿದಲ್ಲಿ, ರಾಷ್ಟ್ರಾಧ್ಯಕ್ಷ ಹುದ್ದೆಗೆ ಅವರಿಗಿರುವ ಅರ್ಹತೆಯನ್ನು ನ್ಯಾಯಾಲಯ ಪ್ರಶ್ನಿಸುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.