ಎಲ್ಟಿಟಿಇ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಶರಣಾಗತರಾದ ನಾಯಕರನ್ನು ಹತ್ಯೆಗೈಯಲು ಆದೇಶ ನೀಡಿದ ಶ್ರೀಲಂಕಾ ಅಧ್ಯಕ್ಷರು ಯುದ್ಧಾಪರಾಧಿಯಾಗಿದ್ದು, ಅವರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸಬೇಕು ಎಂದು ಕೆನಡಾ ತಮಿಳರು ಆಗ್ರಹಿಸಿದ್ದಾರೆ.
ಶರಣಾಗುತ್ತಿದ್ದೇವೆಂದು ಎಲ್ಟಿಟಿಇ ನಾಯಕರು ಬಿಳಿ ಪತಾಕೆಯನ್ನು ತೋರಿಸಿದ ಹೊರತಾಗಿಯೂ ಅವರನ್ನು ಕೊಂದು ಹಾಕುವಂತೆ ರಕ್ಷಣಾ ಕಾರ್ಯದರ್ಶಿ ಗೋಟಬಯಾ ಸೇನೆಗೆ ಆದೇಶ ನೀಡಿದ್ದರು ಎಂದು ಶ್ರೀಲಂಕಾ ಸೇನೆಯ ಮಾಜಿ ಮುಖ್ಯಸ್ಥ ಹಾಗೂ ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸರತ್ ಫೋನ್ಸೆಕಾ ಆಪಾದಿಸಿದ್ದರು.
ರಕ್ಷಣಾ ಕಾರ್ಯದರ್ಶಿಯವರು ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರ ಸಹೋದರ.
ಎಲ್ಟಿಟಿಇ ಶಾಂತಿ ಪಡೆ ಮುಖ್ಯ ಕಾರ್ಯದರ್ಶಿ ಶಿವರತ್ನಂ ಪುಲಿದೇವನ್, ರಾಜಕೀಯ ವಿಭಾಗದ ಮುಖ್ಯಸ್ಥ ಬಾಲಸಿಂಗಂ ನಂದೇಸನ್ ಮತ್ತು ಅಗ್ರ ಮಿಲಿಟರಿ ಕಮಾಂಡರ್ ರಮೇಶ್ ಮತ್ತು ಅವರ ಕುಟುಂಬಿಕರನ್ನು ಕೊಂದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಶ್ರೀಲಂಕಾ ಸೇನೆಯು ಈ ರೀತಿಯ ಅಪರಾಧಗಳನ್ನು ಮಾಡುತ್ತಿದೆ ಎಂದು ಆರಂಭದಿಂದಲೇ ನಮಗೆ ಗೊತ್ತಿತ್ತು. ಆದರೆ 'ಏನಿದೆ ಸಾಕ್ಷಿ?' ಎಂದು ಅಂತಾರಾಷ್ಟ್ರೀಯ ಸಮುದಾಯಗಳು ನಮ್ಮಲ್ಲಿ ಪ್ರಶ್ನಿಸಿದ್ದವು. ಇದೀಗ ಸೇನೆಯಿಂದಲೇ ಸಾಕ್ಷಿ ಹೊರ ಬಿದ್ದಿದೆ ಎಂದು ಕೆನಡಾದ ತಮಿಳು ಕಾಂಗ್ರೆಸ್ ವಕ್ತಾರ ಡೇವಿಡ್ ಪೂಪಾಲಪಿಳ್ಳೈ ಲಂಕಾವನ್ನು ತರಾಟೆಗೆ ತೆಗೆದುಕೊಂಡರು.
ವಿಶ್ವ ನಾಯಕರಿಗೆ ಇನ್ನೇನು ಪುರಾವೆಗಳು ಬೇಕಾಗಿವೆ? ಮಾನವೀಯತೆಗೆ ಬೆನ್ನು ಹಾಕಿದ ಶ್ರೀಲಂಕಾ ಅಧ್ಯಕ್ಷರು ಮತ್ತು ಅವರ ಸಹಚರರ ಅಪರಾಧಗಳ ವಿರುದ್ಧ ಈಗಲಾದರೂ ಅಂತಾರಾಷ್ಟ್ರೀಯ ಸಮುದಾಯ ದನಿ ಎತ್ತಲಿ ಎಂದು ಅವರು ಒತ್ತಾಯಿಸಿದ್ದಾರೆ.
ರಾಜಪಕ್ಷೆಯವರೊಬ್ಬ ಯುದ್ಧಾಪರಾಧಿ. ಅವರ ತಪ್ಪುಗಳಿಗಾಗಿ ಅವರನ್ನು ಹೇಗ್ಗೆ (ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಕರೆದೊಯ್ದು ವಿಚಾರಣೆ ನಡೆಸಬೇಕು. ಯಾವ ದೇಶವೂ ಜಿನೇವಾ ಒಪ್ಪಂದವನ್ನು ಶ್ರೀಲಂಕಾದಂತೆ ಉಲ್ಲಂಘಿಸಿಲ್ಲ. ಯಾವುದೇ ದೇಶವು ಶರಣಾದ ವೈರಿಗಳನ್ನು ಕೊಂದು ಹಾಕಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.