'ಶ್ರೀಲಂಕಾ ಮಿಲಿಟರಿ ಪಡೆಗೆ ಶರಣಾದ ಎಲ್ಟಿಟಿಇ ಮುಖಂಡರನ್ನು ಹತ್ಯೆಗೈಯಲು ಸ್ವತಃ ಲಂಕಾ ರಕ್ಷಣಾ ಕಾರ್ಯದರ್ಶಿಯವರೇ ಆದೇಶ ನೀಡಿದ್ದರು ಎಂಬ ಸ್ಫೋಟಕ ಆರೋಪ ಮಾಡಿದ್ದ' ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಪ್ರತಿಸ್ಪರ್ಧಿ ಅಭ್ಯರ್ಥಿ, ಆರ್ಮಿಯ ಮಾಜಿ ಜನರಲ್ ಸರತ್ ಫೋನ್ಸೆಕಾ ಇದೀಗ ಉಲ್ಟಾ ಹೊಡೆದಿದ್ದು, ತಾವು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಲಂಕಾ ಸರ್ಕಾರದ ವಿರುದ್ಧವೇ ಫೋನ್ಸೆಕಾ ಹೇಳಿಕೆ ನೀಡಿದ 24ಗಂಟೆಯೊಳಗೆ ವಿವಾದದ ಕಿಡಿ ಹೊತ್ತಿಕೊಂಡಿತ್ತು. ತಮ್ಮ ಹೇಳಿಕೆ ಕುರಿತು ಕೂಡಲೇ ಪತ್ರಿಕಾಗೋಷ್ಠಿ ಕರೆದ ಅವರು, ತಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು. ಅಲ್ಲದೇ, ಎಲ್ಟಿಟಿಇ ವಿರುದ್ಧ ನಡೆಸಿದ ಕದನದಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಯಾವತ್ತೂ ಅಂತಾರಾಷ್ಟ್ರೀಯ ಕಟ್ಟಳೆಯನ್ನು ಉಲ್ಲಂಘಿಸಿಲ್ಲ ಎಂಬುದಾಗಿಯೂ ಹೇಳಿದರು.
ಶ್ರೀಲಂಕಾ ಮಿಲಿಟರಿ ಪಡೆ ಶರಣಾದ ಎಲ್ಟಿಟಿಇಯ ಮೂರು ಮಂದಿ ಮುಖಂಡರನ್ನು ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿಯವರು ಆದೇಶದ ಮೇರೆಗೆ ಹತ್ಯೆಗೈದಿರುವುದಾಗಿ ಲಂಕಾ ಮಿಲಿಟರಿಯ ಮಾಜಿ ಜನರಲ್ ಸರತ್ ಫೋನ್ಸೆಕಾ ನಿನ್ನೆ ಗಂಭೀರವಾಗಿ ಆರೋಪಿಸಿದ್ದರು.
ಫೋನ್ಸೆಕಾ ದಿ ಸಂಡೆ ವೀಕ್ಲಿಗೆ ನೀಡಿರುವ ಸಂದರ್ಶನದಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದರು. ಲಂಕಾ ಮಿಲಿಟರಿ ಪಡೆಗೆ ಶರಣಾದ ಮೂರು ಮಂದಿ ಎಲ್ಟಿಟಿಇ ಮುಖಂಡರನ್ನು ಲಂಕಾ ಅಧ್ಯಕ್ಷ ರಾಜಪಕ್ಸೆ ಸಹೋದರರು ಹಾಗೂ ರಕ್ಷಣಾ ಕಾರ್ಯದರ್ಶಿಯಾಗಿರುವ ಗೋಟಬಯಾ ಅವರು ಹತ್ಯೆಗೈಯಲು ಆದೇಶ ನೀಡಿರುವುದಾಗಿ ಹೇಳಿದ್ದರು.