ಕೊಪನ್ಹೇಗನ್, ಬುಧವಾರ, 16 ಡಿಸೆಂಬರ್ 2009( 12:29 IST )
ಹವಾಮಾನ ವೈಪರೀತ್ಯ ಕುರಿತು ಇಲ್ಲಿ ನಡೆಯುತ್ತಿರುವ ಮಾತುಕತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲೂ ಇನ್ನೂ ಕೂಡ ವಿಫಲವಾಗಿದೆ. ಜಾಗತಿಕ ತಾಪಮಾನ ತಡೆ ಕುರಿತು ನಡೆದ ಶೃಂಗಸಭೆ ಗೊಂದಲದಲ್ಲಿಯೇ ಮುಕ್ತಾಯಗೊಂಡು ಎರಡು ದಿನ ಕಳೆದಿದೆ. ಆದರೂ ಶ್ರೀಮಂತ ಮತ್ತು ಅಭಿವೃದ್ಧಿಶೀಲ ದೇಶಗಳ ನಡುವೆ ಸಂಧಾನ ಮಾತುಕತೆ ಅತಂತ್ರದಲ್ಲಿಯೇ ಮುಂದುವರಿದಿದೆ.
ಕ್ಯೋಟೊ ಒಪ್ಪಂದವನ್ನು ಬಲವಂತವಾಗಿ ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬೇಸಿಕ್ ರಾಷ್ಟ್ರಗಳ ಪರಿಸರ ಸಚಿವರು ಶೃಂಗಸಭೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಕ್ಯೋಟೊ ಒಪ್ಪಂದ ಚರ್ಚೆಯ ಪುನರಾರಂಭಕ್ಕೆ ಸಂಧಾನಕಾರರು ಮುಂದಾಗಿದ್ದಾರೆಂದು ಭಾರತ ಹೇಳಿದೆ.
ಹವಾಮಾನ ವೈಪರೀತ್ಯ ಸಂಧಾನ ಚರ್ಚೆ ಬಾಲಿ ಒಪ್ಪಂದ(ಎಲ್ಸಿಎ) ಹಾಗೂ ಕ್ಯೋಟೊ ಒಪ್ಪಂದ ಎಂಬ ಎರಡು ಹಳಿಗಳ ಮೇಲೆ ನಡೆಯುತ್ತಿದೆ. ಈ ಎರಡೂ ಚರ್ಚೆಗಳು ಸಮಾನ ವೇಗದಲ್ಲಿ ನಡೆದರೆ ಫಲಿತಾಂಶ ಕೂಡ ಅಷ್ಟೇ ಸರಿಸಮನಾಗಿರುತ್ತದೆ. ಅತ್ಯಧಿಕ ಕೈಗಾರಿಕೆ ಹೊಂದಿರುವ ದೇಶಗಳೇ ಕ್ಯೋಟೊ ನಿಯಮಾವಳಿಗೆ ಬದ್ದವಾಗಿರಬೇಕು ಎಂದು ಭಾರತದ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ.
ವಿಪರ್ಯಾಸವೆಂದರೆ ಶ್ರೀಮಂತ ದೇಶಗಳು ಅಭಿವೃದ್ಧಿಶೀಲ ದೇಶಗಳ ಮೇಲೆ ಕ್ಯೋಟೊ ನಿಯಮಾವಳಿ ಹೇರಲು ಯತ್ನಿಸುತ್ತಿದ್ದು, ಹವಾಮಾನ ವೈಪರೀತ್ಯ ತಡೆಗೆ ಮುಂದಾಗಲು ಸೂಚಿಸುತ್ತಿದೆ. ಆ ನಿಟ್ಟಿನಲ್ಲಿ ಭಾರತ ಯಾವುದೇ ಕಾರಣಕ್ಕೂ ಅಭಿವೃದ್ಧಿಶೀಲ ದೇಶಗಳ ಮೇಲೆ ಕ್ಯೋಟೊ ನಿಯಮಾವಳಿ ಹೇರುವುದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಭಾರತ ಹವಾಮಾನ ವೈಪರೀತ್ಯ ತಡೆ ಕುರಿತಂತೆ ದೇಶೀಯವಾಗಿಯೇ ಕ್ರಮವನ್ನು ಕೈಗೊಳ್ಳುತ್ತದೆ ವಿನಃ ಅದಕ್ಕೆ ಯಾವುದೇ ಕಾನೂನಿನ ನಿರ್ಬಂಧ ವಿಧಿಸುವುದಿಲ್ಲ ಎಂದು ಹೇಳಿದರು.