ಬ್ರಿಟೀಷ್ ಯುವತಿ ಸ್ಕಾರ್ಲೆಟ್ ಕೊಲೆ ಮತ್ತು ರಷ್ಯನ್ ಅತ್ಯಾಚಾರ ಬಲಿಪಶು ಯುವತಿಯ ಬಗ್ಗೆ ಗೋವಾದ ಕಾಂಗ್ರೆಸ್ ಸಂಸದ ನೀಡಿದ ಅವಹೇಳನಕಾರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಷ್ಯಾ, ರಾತ್ರಿ 10ರ ನಂತರ ಗೋವಾದಲ್ಲಿನ ಹೊಟೇಲುಗಳಿಂದ ತನ್ನ ರಾಷ್ಟ್ರದ ಪ್ರವಾಸಿಗರು ಹೊರ ಹೋಗದಂತೆ ಸೂಚನೆ ನೀಡಿದೆ.
ಗೋವಾದಲ್ಲಿ ತಂಗಿರುವ ರಷ್ಯಾ ಪ್ರಜೆಗಳು ರಾತ್ರಿ 10 ಗಂಟೆಯ ನಂತರ ಹೊಟೇಲುಗಳನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ರಷ್ಯಾ ರಾಯಭಾರ ಕಚೇರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅಲ್ಲದೆ ವಿಲೇವಾರಿಯಾಗದೆ ಉಳಿದಿರುವ ರಷ್ಯಾ ನಾಗರಿಕರಿಗೆ ಸಂಬಂಧಿಸಿದ ಇತರ ಪ್ರಕರಣಗಳು ಏನಾಗಿವೆ ಎಂದು ರಾಜ್ಯ ಸರಕಾರವನ್ನು ರಷ್ಯಾ ಪ್ರಶ್ನಿಸಿದೆ.
ಸಂಸದ ನಾಯ್ಕ್ ಹೇಳಿಕೆಯನ್ನು ಖಂಡಿಸಿ ಗೋವಾ ರಾಜ್ಯ ಸರಕಾರಕ್ಕೆ ನಿನ್ನೆ ತಡ ರಾತ್ರಿ ಪತ್ರ ಬರೆದಿರುವ ರಷ್ಯಾ, ಮುಂಬೈಯಲ್ಲಿರುವ ತನ್ನ ರಾಯಭಾರ ಕಚೇರಿಯ ಮೂಲಕ ರವಾನಿಸಿದೆ.
ಗೋವಾದಲ್ಲಿ ರಾತ್ರಿ ಎರಡು ಗಂಟೆಗೆ ನಡೆದ ರಷ್ಯಾ ಯುವತಿಯ ಅತ್ಯಾಚಾರಕ್ಕೆ ಆಕೆಯದ್ದೇ ಪ್ರಮಾದ ಕಾರಣವಾಗಿದೆ ಎಂದು ಗೋವಾ ಸರಕಾರ ಹೇಳುವುದಾದರೆ, ತನ್ನ ಪ್ರಜೆಗಳು ರಾತ್ರಿ 10 ಗಂಟೆಯ ಬಳಿಕ ಹೊಟೇಲ್ ಬಿಟ್ಟು ತೆರಳದಂತೆ ತಾನು ಸಲಹೆ ನೀಡುವುದಾಗಿ ಇದೇ ಪತ್ರದಲ್ಲಿ ರಷ್ಯಾ ಹೇಳಿದೆ.
ಅಲ್ಲದೆ ರಷ್ಯಾದ ಅತ್ಯಾಚಾರ ಬಲಿಪಶು ಯುವತಿಯನ್ನು ಅಲ್ಲಿನ ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆಕೆಯ ವಿರುದ್ಧ ಅಶ್ಲೀಲ ಭಾಷೆಗಳನ್ನು ಪ್ರಯೋಗಿಸಲಾಗುತ್ತಿದೆ ಎಂದು ರಷ್ಯಾ ದೂರಿದೆ.
ಕಾಂಗ್ರೆಸ್ ಸಂಸದ ಶಾಂತಾರಾಮ ನಾಯ್ಕ್, ಮಂಗಳವಾರ ರಾಜ್ಯಸಭೆಯಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆಂದು ತೀವ್ರ ಆಕ್ಷೇಪಗಳು ಕೇಳಿ ಬಂದಿದ್ದವು.
ಕೆಲವು ಯುವತಿಯರು ಅಪರಿಚಿತರೊಂದಿಗೆ ತೆರಳಿ ಅವರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುತ್ತಾರೆ. ನಂತರ ಸಮಸ್ಯೆಗಳು ಎದುರಾದಾಗ ತಮ್ಮ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪುರುಷರ ಮೇಲೆ ದೂರು ನೀಡುತ್ತಾರೆ ಎಂದು ವಿದೇಶೀಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು.