ಎಲ್ಟಿಟಿಇಯ ತಮಿಳು ಪುನರ್ವಸತಿ ಸಂಘಟನೆಯ ಆರ್ಥಿಕ ವ್ಯವಹಾರ ವಿಭಾಗದ ಮುಖ್ಯಸ್ಥನೊಬ್ಬನನ್ನು ಶ್ರೀಲಂಕಾದ ಅಪರಾಧ ತನಿಖಾ ದಳ ಬಂಧಿಸಿರುವುದಾಗಿ ತಿಳಿಸಿದೆ.
ಲಂಕಾ ಮಿಲಿಟರಿ ವಿರುದ್ಧ ತಮಿಳು ಲಿಬರೇಶನ್ ಆಫ್ ಟೈಗರ್ಸ್ ನಡೆಸುತ್ತಿದ್ದ ಸಮರಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಒದಗಿಸಿರುವುದಾಗಿ ಲಂಕಾ ಆರೋಪಿಸಿದೆ. ತಮಿಳರ ಪುನರ್ವಸತಿ ಸಂಘಟನೆ ಹೆಸರಲ್ಲಿ ಸಂಗ್ರಹಿಸಿದ್ದ ಹಣವನ್ನು ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್, ರಾಜಕೀಯ ಮುಖ್ಯಸ್ಥ ಎಸ್.ತಮಿಳ್ ಸೆಲ್ವನ್ ಹಾಗೂ ಹಲವು ಪ್ರಮುಖ ಮುಖಂಡರಿಗೆ ಒದಗಿಸಿರುವುದಾಗಿ ತನಿಖೆಯಿಂದ ಹೊರಬಿದ್ದಿದೆ.
ತನ್ನ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದ ಸಂಘಟನೆಯ ಆರ್ಥಿಕ ವ್ಯವಹಾರ ವಿಭಾಗದ ಮುಖ್ಯಸ್ಥನನ್ನು ಚುನ್ನಾಕಂ ಎಂಬಲ್ಲಿ ವಿಶೇಷ ತಂಡದ ಅಧಿಕಾರಿಗಳು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಆತ ವಾಯುನಿಯಾ ಪ್ರದೇಶದಲ್ಲಿ ವಾಸವಾಗಿದ್ದು, ಇತ್ತೀಚೆಗಷ್ಟೇ ಚುನ್ನಾಕಂಗೆ ಸ್ಥಳಾಂತರಗೊಂಡಿರುವುದಾಗಿ ವಿವರಿಸಿದ್ದಾರೆ.
ಆತನ ಪತ್ನಿ ಗರ್ಭಿಣಿಯಾಗಿದ್ದು, ಆಕೆ ಕಿಲಿನೋಚ್ಚಿಯಲ್ಲಿ ಸಾರ್ಮುಧಿ ಆನಿಮೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.