ಶಂಕಿತ ಉಗ್ರರಾದ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಮತ್ತು ತಹಾವುರ್ ಹುಸೈನ್ ರಾಣಾರಿಗೆ ನೀಡಲಾಗಿದ್ದ ವೀಸಾ ದಾಖಲೆಗಳು ಕಾಣೆಯಾಗಿಲ್ಲ, ಈ ಸಂಬಂಧ ಅಮೂಲ್ಯ ಮಾಹಿತಿಗಳು ಭಾರತ ಸರಕಾರದಲ್ಲಿದೆ ಎಂದು ಚಿಕಾಗೋದಲ್ಲಿನ ಭಾರತೀಯ ದೂತವಾಸ ಗುರುವಾರ ಸ್ಪಷ್ಟನೆ ನೀಡಿದೆ.
ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹಾವುರ್ ಹುಸೈನ್ ರಾಣಾರವರ ವೀಸಾ ದಾಖಲೆಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿಯೇ ಇಲ್ಲ. ಇವರಿಬ್ಬರಿಗೆ ಸಂಬಂಧಪಟ್ಟ ವೀಸಾ ದಾಖಲೆಗಳ ಅಮೂಲ್ಯ ಮಾಹಿತಿಗಳು ಭಾರತ ಸರಕಾರದಲ್ಲಿದೆ ಎಂದು ದೂತವಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಕಾಗೋದ ಭಾರತೀಯ ದೂತವಾಸ ಕಚೇರಿಯು ಹೆಡ್ಲಿ ಮತ್ತು ರಾಣಾ ಅವರಿಗೆ ನೀಡಲಾಗಿದ್ದ ವೀಸಾ ದಾಖಲೆಗಳು ನಿಗೂಢವಾಗಿ ಕಾಣೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿಗಳ ಹಿನ್ನಲೆಯಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, ಪ್ರಕರಣದ ಸಂಬಂಧ ವಾಸ್ತವ ವರದಿ ನೀಡುವಂತೆ ಚಿಕಾಗೋ ದೂತವಾಸಕ್ಕೆ ಸೂಚನೆ ನೀಡಿದ್ದರು.
ಪಾಕಿಸ್ತಾನ ಮೂಲದ ಅಮೆರಿಕಾ ಪ್ರಜೆ ಹೆಡ್ಲಿ ಮತ್ತು ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ ಬಹುದೇಶೀಯ ವೀಸಾವನ್ನು ಭಾರತೀಯ ಕಚೇರಿಯಿಂದ ಪಡೆದುಕೊಂಡು ಭಾರತ ಪ್ರವೇಶ ಮಾಡಿದ್ದರು.
ಭಾರತ ಮತ್ತು ಡೆನ್ಮಾರ್ಕ್ಗಳಲ್ಲಿ ಹಲವು ಸ್ಫೋಟ ಸಂಚುಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಹೆಡ್ಲಿ ಮತ್ತು ರಾಣಾರನ್ನು ಎಫ್ಬಿಐ ಇತ್ತೀಚೆಗಷ್ಟೇ ಬಂಧಿಸಿತ್ತು. ಇವರಿಬ್ಬರು ಮುಂಬೈ ಉಗ್ರರ ದಾಳಿಯ ಸಂಚಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಲಾಗಿದೆ.