'ನೇಪಾಳದ ರಾಜಧಾನಿ ಸ್ವಾಯತ್ತ ಪ್ರದೇಶ ಎಂದು ಮಾವೋವಾದಿಗಳು ಬುಧವಾರ ಘೋಷಿಸಿರುವ ಹಿನ್ನೆಲೆಯಲ್ಲಿ, ಮಾವೋಗಳು ಕಾಠ್ಮಂಡುವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದೆಂಬ ಕಾರಣದಿಂದ ದುರ್ಬಾರ್ ಸ್ವೇರ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಾವೋ ವರಿಷ್ಠ ಪ್ರಚಂಡ ಅವರು, ಕಾಠ್ಮಂಡು ಸ್ವಾಯತ್ತ ಪ್ರದೇಶ ಎಂದು ಘೋಷಿಸಿದ್ದು, ಸುಮಾರು ಐದು ಸಾವಿರ ಮಂದಿ ಕೆಂಪು ಬಾವುಟ ಹಿಡಿದು ದುರ್ಬಾರ್ ಸ್ವೇರ್ ಒಳಗೆ ನುಗ್ಗಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಒಂಬತ್ತು ಜಿಲ್ಲೆಗಳಲ್ಲಿ ಸಮಾನ ಸರ್ಕಾರದ ಆಡಳಿತವನ್ನು ರಚಿಸಲಾಗುವುದು ಎಂದು ಕೂಡ ಮಾವೋವಾದಿಗಳು ತಿಳಿಸಿದ್ದರು.
ಆ ನಿಟ್ಟಿನಲ್ಲಿ ನೇಪಾಳದಲ್ಲಿ ಮತ್ತೊಂದು ರಾಜಕೀಯ ಬಿಕ್ಕಟ್ಟು ತಲೆದೋರಿದಂತಾಗಿದ್ದು, ಮತ್ತೆ ಮಾವೋವಾದಿಗಳು ಮತ್ತು ಸರ್ಕಾರದ ನಡುವೆ ಕಂದಕ ಏರ್ಪಟ್ಟಂತಾಗಿದೆ. ಮಾವೋವಾದಿಗಳು ಎಚ್ಚರಿಕೆ ಕೂಡ ಸಿಪಿಎನ್-ಯುಎಂಎಲ್ ಸೇರಿದಂತೆ 22ಪಕ್ಷಗಳ ಆಡಳಿತರೂಢ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ನೇಪಾಳದಲ್ಲಿನ ನಮ್ಮ ನಡವಳಿಕೆ ಶಾಂತಿ ಪ್ರಕ್ರಿಯೆಯನ್ನು ಹಾಳುಗೆಡುವುದಾಗಲಿ ಅಥವಾ ಸಂವಿಧಾನವನ್ನು ವಿರೋಧಿಸುವುದಾಗಲಿ ಅಲ್ಲ ಎಂದು ಹೇಳಿರುವ ಪ್ರಚಂಡ, ಜನರಿಗೆ ಸುವ್ಯವಸ್ಥಿತವಾದ ಆಡಳಿತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವುದೇ ನಮ್ಮ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.