ಸಂಕಷ್ಟದಲ್ಲಿ ಜರ್ದಾರಿ; ಪಾಕ್ ಸಚಿವರ ವಿದೇಶ ಪ್ರವಾಸಕ್ಕೆ ತಡೆ
ಇಸ್ಲಾಮಾಬಾದ್, ಶುಕ್ರವಾರ, 18 ಡಿಸೆಂಬರ್ 2009( 10:31 IST )
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಇತರ ರಾಜಕಾರಣಿಗಳಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ನೀಡಲಾಗಿದ್ದ ಕ್ಷಮಾದಾನವನ್ನು ಇಲ್ಲಿನ ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬೆನ್ನಿಗೆ ಪ್ರಮುಖ ಸಚಿವರ ವಿದೇಶ ಪ್ರವಾಸಕ್ಕೂ ತಡೆ ನೀಡಲಾಗಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ತಲೆದೋರುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಇದು ಜರ್ದಾರಿಯವರ ಅಧ್ಯಕ್ಷೀಯ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡದು ಎಂದೇ ಇಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ತೀವ್ರ ಒತ್ತಡ ಎದುರಿಸುತ್ತಿರುವ ಜರ್ದಾರಿ ರಾಜಿನಾಮೆ ನೀಡುವುದೇ ಒಳಿತು ಎಂಬ ಅಭಿಪ್ರಾಯಗಳೂ ರಾಜಕೀಯ ವಲಯದಲ್ಲಿ ಸಾರ್ವತ್ರಿಕವಾಗುತ್ತಿದೆ.
ಈ ಹಿಂದೆ ಜರ್ದಾರಿ ಮತ್ತು ಇತರ 8,000ಕ್ಕೂ ಹೆಚ್ಚು ಮಂದಿಯ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳಿಂದ 'ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಮಸೂದೆ'ಯಂತೆ ಕ್ಷಮಾದಾನ ನೀಡಲಾಗಿತ್ತು.
ಆದರೆ ಇದನ್ನು ಪಾಕಿಸ್ತಾನ ಸುಪ್ರೀಂ ಕೋರ್ಟಿನ ಇಫ್ತಿಕಾರ್ ಚೌದುರಿ ನೇತೃತ್ವದ 17 ನ್ಯಾಯಮೂರ್ತಿಗಳ ಪೀಠವು ರದ್ದುಗೊಳಿಸಿ, ಪ್ರಕರಣಕ್ಕೆ ಮರು ಜೀವ ನೀಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜರ್ದಾರಿ ವಿಚಾರಣೆಗೊಳಪಡುವುದು ಅನಿವಾರ್ಯವಾಗಲಿದೆ.
ಈ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂಬ ಒತ್ತಡವೂ ಹೆಚ್ಚುತ್ತಿದೆ. ನ್ಯಾಯಾಲಯ ತೆಗೆದುಕೊಂಡಿರುವ ಈ ಕ್ರಮದ ಬಗ್ಗೆ ವ್ಯಾಪಕ ಶ್ಲಾಘನೆಗಳೂ ವ್ಯಕ್ತವಾಗಿವೆ. ಇಲ್ಲಿನ ಪತ್ರಿಕೆಗಳಂತೂ ಭಾರೀ ಪ್ರಶಂಸೆಗಳನ್ನೇ ಸುರಿಸಿವೆ.
ಸಚಿವರ ವಿದೇಶ ಪ್ರವಾಸಕ್ಕೆ ತಡೆ... ನ್ಯಾಯಾಲಯವು ಕ್ಷಮಾದಾನವನ್ನು ರದ್ದುಪಡಿಸಿದ ಬೆನ್ನಿಗೆ ಪ್ರಮಖ ಸಚಿವರ ವಿದೇಶ ಪ್ರವಾಸಗಳ ಮೇಲೆ ನಿಷೇಧ ಹೇರಲಾಗಿದೆ.
ಜರ್ದಾರಿ ಆಪ್ತ ಎಂದೇ ಹೇಳಲಾಗುವ ರಕ್ಷಣಾ ಸಚಿವ ಚೌದುರಿ ಅಹ್ಮದ್ ಮುಖ್ತಾರ್ ಗುರುವಾರ ಅಧಿಕೃತ ಚೀನಾ ಪ್ರವಾಸಕ್ಕಾಗಿ ಹೊರಟಿದ್ದರು. ಆದರೆ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಮುಖ್ತಾರ್ ಸೇರಿದಂತೆ ರಾಷ್ಟ್ರದ 248 ಪ್ರಮುಖ ರಾಜಕಾರಣಿಗಳು ದೇಶ ಬಿಟ್ಟು ಹೋಗದಂತೆ ಆದೇಶ ನೀಡಲಾಗಿದೆ. ಹಾಗಾಗಿ ಅವರುಗಳ ವಿದೇಶ ಯಾನಕ್ಕೆ ಅವಕಾಶ ನೀಡಲಾಗುತ್ತಿಲ್ಲ.