ಕೋಪನ್ಹೇಗನ್, ಶುಕ್ರವಾರ, 18 ಡಿಸೆಂಬರ್ 2009( 19:41 IST )
PTI
ಹವಾಮಾನ ವೈಪರೀತ್ಯ ತಡೆ ಕುರಿತು ಶ್ರೀಮಂತ ರಾಷ್ಟ್ರಗಳ ನಿಲುವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತ ಮತ್ತು ಚೀನಾ ಶುಕ್ರವಾರ ಇಲ್ಲಿ ನಡೆಯುತ್ತಿರುವ ಶೃಂಗಸಭೆಯಿಂದ ಹೊರನಡೆಯುವ ಮೂಲಕ ತಮ್ಮ ಅಸಮಾಧಾನ ತೋರ್ಪಡಿಸಿದವು.
ಶ್ರೀಮಂತ ರಾಷ್ಟ್ರಗಳು ಕ್ಯೋಟೊ ನಿಯಮಾವಳಿಯನ್ನು ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರಲು ಯತ್ನಿಸುತ್ತಿರುವುದನ್ನು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಚೀನಾ ಪ್ರಧಾನಿ ವೆನ್ ಜಿಯಾಬಾವೋ ಅವರು ತೀವ್ರವಾಗಿ ವಿರೋಧಿಸಿದರು. ಅಲ್ಲದೇ ಹಿಂದುಳಿದ ರಾಷ್ಟ್ರಗಳ ಮೇಲೆ ಶ್ರೀಮಂತ ದೇಶಗಳು ತಮ್ಮ ಹಿಡಿತ ಸಾಧಿಸಲು ಹೊರಟಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
'ಒಟ್ಟಾರೆ ಹವಾಮಾನ ವೈಪರೀತ್ಯ ತಡೆ ಕುರಿತು ನಡೆಸುತ್ತಿರುವ ಶೃಂಗಸಭೆ ವಿಫಲವಾಗಿದೆ' ಎಂದಿರುವ ಮನಮೋಹನ್ ಸಿಂಗ್, ಜಾಗತಿಕ ತಾಪಮಾನ ಕುರಿತಂತೆ ಒಮ್ಮತಾಭಿಪ್ರಾಯದ ಮಾತುಕತೆಯನ್ನು 2010ರೊಳಗೆ ಮುಕ್ತಾಯಗೊಳಿಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಡ್ಯಾನಿಶ್ ರಾಜಧಾನಿಯಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ಕುರಿತ ಶೃಂಗಸಭೆಯಲ್ಲಿ 194ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹವಾಮಾನ ವೈಪರೀತ್ಯ ಕುರಿತಂತೆ ಹಾಗೂ ಜಾಗತಿಕ ತಾಪಮಾನ ತಡೆಗಾಗಿ ಮುಂದಿನ ಮಾತುಕತೆಯ ಅಂತಿಮ ನಿರ್ಧಾರವನ್ನು 2010ರೊಳಗೆ ಪೂರ್ಣಗೊಳಿಸುವಂತೆ ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಾರಿಯ ಶೃಂಗಸಭೆಯಲ್ಲಿ ಹವಾಮಾನ ಕುರಿತಂತೆ ಅಂತಿಮ ನಿಲುವು ತಾಳಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದರು.
ಅಮೆರಿಕದ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ: ಹವಾಮಾನ ವೈಪರೀತ್ಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಹವಾಮಾನ ವೈಪರೀತ್ಯ ತಡೆ ಬಗ್ಗೆ ಅಮೆರಿಕದ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದರು. ಅಲ್ಲದೇ, ಜಾಗತಿಕವಾಗಿ ಸವಾಲಾಗಿ ಪರಿಣಮಿಸಿರುವ ಹವಾಮಾನ ವೈಪರೀತ್ಯ ತಡೆ ಎಲ್ಲಾ ದೇಶಗಳ ಕರ್ತವ್ಯವಾಗಿದೆ ಎಂದು ವಿಶ್ವಸಮುದಾಯಕ್ಕೆ ಕರೆ ನೀಡಿದರು.