ಪಿಜ್ಜಾ ಬಡವಾಡೆ ಮಾಡುತ್ತಿದ್ದ ಪದವೀಧರ ಸಿಖ್ ಸಮುದಾಯದ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಜುಕೊಳಕ್ಕೆ ಎಸೆದು ಹೋದ ಘಟನೆ ಪಶ್ಚಿಮ ಟೆಕ್ಸಾಸ್ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಿಜ್ಜಾವನ್ನು ಮನೆ,ಮನೆಗೆ ಬಡವಾಡೆ ಮಾಡಲು ತೆರಳುತ್ತಿದ್ದ ಸಿಖ್ ಯುವಕನನ್ನು ಅಡ್ಡಗಟ್ಟಿ ನಿಲ್ಲಿಸಿದ ನಾಲ್ಕು ಮಂದಿ, ಏಕಾಏಕಿ ಆತನಿಂದ ಪಿಜ್ಜಾವನ್ನು ಕಸಿದುಕೊಂಡು ತಿನ್ನಲು ಆರಂಭಿಸಿದ್ದರು. ಆಗ ಇದನ್ನು ವಿರೋಧಿಸಿದ ಯುವಕನಿಗೆ ಬೆದರಿಕೆ ಹಾಕಿದ್ದರು. ಇದೊಂದು ಜನಾಂಗೀಯ ದ್ವೇಷದ ಹಲ್ಲೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
'ನಾವು...ಹೋಗುತ್ತೇವೆ., ನೀನು ಇರಾಕ್ಗೆ ತೊಲಗು.,ನಾವು...ಹೋಗುತ್ತೇವೆ., ನೀನು ಅಫ್ಘಾನಿಸ್ತಾನಕ್ಕೆ ಹೋಗು' ಹೀಗೆ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ಮಾಧ್ಯಮ ವರದಿಯೊಂದು ವಿವರಿಸಿದೆ. ಆದರೆ ಯಾವ ಸ್ಥಳದಲ್ಲಿ ಈ ಘಟನೆ ನಡೆಯಿತೆಂಬುದನ್ನು ತಿಳಿಸಿಲ್ಲ.
ಸಿಖ್ ಯುವಕನೊಂದಿಗೆ ಘರ್ಷಣೆಗೆ ಇಳಿದ ನಾಲ್ವರ ಗುಂಪು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಈಜುಕೊಳಗೆ ದೂಡಿದ್ದರು. ನಂತರ ಕೂಡ ಆತನ ತಲೆ ಮತ್ತು ಮೈಮೇಲೆ ಹಲ್ಲೆ ನಡೆಸಿದ್ದರು. ಆದರೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಸುತ್ತುಗಟ್ಟಿ ಥಳಿಸಿದ್ದರೆನ್ನಲಾಗಿದೆ.
ಘಟನೆ ಬಗ್ಗೆ ಪೊಲೀಸರಿಗೆ ತಿಳಿಸದರೂ ಕೂಡ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂದು ಸಿಖ್ ಸಮುದಾಯ ಆರೋಪಿಸಿದೆ. ಅಲ್ಲದೇ ದಾಳಿಕೋರರು ಕೇವಲ ಸಿಖ್ ಯುವಕನ ಮೇಲೆ ಮಾತ್ರ ಹಲ್ಲೆ ನಡೆಸಿಲ್ಲ,ಬದಲಾಗಿ ಸಿಖ್ ಸಮುದಾಯವನ್ನೇ ಅವಹೇಳನ ಮಾಡುವಂತಹ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಹಲ್ಲೆಗೈದಿರುವುದಾಗಿ ದೂರಿದ್ದಾರೆ.
ಇದೀಗ ಘಟನೆ ಕುರಿತಂತೆ ಸ್ಥಳೀಯ ಪೊಲೀಸರು ದಾಳಿಕೋರರ ವಿರುದ್ಧ ದೂರು ದಾಖಲಿಸಲು ಮತ್ತು ತನಿಖೆ ನಡೆಸಲು ನಿರಾಕರಿಸಿದ ನಂತರ, ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್(ಡಿಓಜೆ) ತನಿಖೆಯನ್ನು ಆರಂಭಿಸಿದೆ.