ಇಸ್ಲಾಮಾಬಾದ್, ಸೋಮವಾರ, 21 ಡಿಸೆಂಬರ್ 2009( 18:10 IST )
ಸುಪ್ರೀಂ ಕೋರ್ಟಿನಿಂದ ಕ್ಷಮಾದಾನ ರದ್ದಾದ ಬೆನ್ನಿಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ಜನವರಿ 2ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿದೆ.
ಕಳೆದ ವಾರವಷ್ಟೇ ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ನೀತಿಯಂತೆ ಸುಪ್ರೀಂ ಕೋರ್ಟ್ ಸುಮಾರು 8,000 ಮಂದಿ ಮೇಲಿನ ಕ್ಷಮಾದಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಕ್ಷಮಾದಾನ ಕಾನೂನಿನ ಲಾಭ ಪಡೆದುಕೊಂಡಿದ್ದ ಮಲಿಕ್ ಮೇಲಿನ ಎರಡು ಹಳೆಯ ಪ್ರಕರಣಗಳೀಗ ಜೀವ ಪಡೆದುಕೊಂಡಿದ್ದು, ಇವುಗಳಿಂದ ಜಾಮೀನಿಗಾಗಿ ಮಲಿಕ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅವರ ವಕೀಲ ಅಮ್ಜದ್ ಇಕ್ಬಾಲ್ ಖುರೇಷಿ ಈಗಾಗಲೇ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಲಿಕ್ ಅವರಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ (ಪಿಪಿಪಿ) ಹಿರಿಯ ನಾಯಕರಾಗಿರುವ ಮಲಿಕ್, ಎರಡೂ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದೆದುರು ಹಾಜರಾಗದ ಕಾರಣದಿಂದ ತಪ್ಪಿತಸ್ಥರು ಎಂದು ಘೋಷಿಸಿದ್ದ ಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಆದರೆ ಅವರ ಮೇಲಿನ ಎರಡೂ ಪ್ರಕರಣಗಳು ಕಳೆದ ವರ್ಷದ ಮಾರ್ಚ್ ತಿಂಗಳ ಕ್ಷಮಾದಾನ ನೀತಿಯಿಂದಾಗಿ ವಜಾಗೊಂಡಿದ್ದವು.
ಮುಂದಿನ ವಿಚಾರಣೆ ನಡೆಯುವ ಜನವರಿ 2ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಮಲಿಕ್ ಅವರಿಗೆ ಆದೇಶ ನೀಡಿರುವ ನ್ಯಾಯಾಧೀಶರು, ಅಂದು ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಪಾಕಿಸ್ತಾನ ಸುಪ್ರೀಂ ಕೋರ್ಟ್ ಕ್ಷಮಾದಾನ ರದ್ದುಗೊಳಿಸಿರುವ ನಿರ್ಧಾರದಿಂದಾಗಿ ಹಲವು ರಾಜಕಾರಣಿಗಳು ಇದೀಗ ಅಪಾಯದ ಸ್ಥಿತಿ ತಲುಪಿದ್ದಾರೆ. ಇವರಲ್ಲಿ ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಕೂಡ ಒಬ್ಬರು. ಸುಮಾರು 260ಕ್ಕೂ ಹೆಚ್ಚು ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಕಾಯ್ದೆಯೊಂದರ ಮೂಲಕ ಕಳೆದ ವರ್ಷ ರದ್ದಾಗಿತ್ತು.