ಕೆಟ್ಟು ಹೋಗಿದ್ದ ಭಾರತೀಯ ಹಡಗು ದುರಸ್ತಿ; ಸಿಬ್ಬಂದಿ ಸುರಕ್ಷಿತ
ವಾಷಿಂಗ್ಟನ್, ಮಂಗಳವಾರ, 22 ಡಿಸೆಂಬರ್ 2009( 10:59 IST )
ಸಾಗರ ಮಧ್ಯದಲ್ಲಿ ಪ್ರತಿಕೂಲ ವಾತಾವರಣದ ಕಾರಣದಿಂದ ಕೆಟ್ಟು ನಿಂತಿದ್ದ ಹಡಗನ್ನು ದುರಸ್ತಿಗೊಳಿಸಲಾಗಿದ್ದು, ಅದರಲ್ಲಿದ್ದ ಎಲ್ಲಾ 28 ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಹಡಗು ಪೋರ್ಟ್ಲೆಂಡ್ನತ್ತ ತನ್ನ ಪ್ರಯಾಣವನ್ನು ಆರಂಭಿಸಿದೆ ಎಂದು ಕರಾವಳಿ ತಟ ರಕ್ಷಣಾ ಪಡೆ ತಿಳಿಸಿದೆ.
ಎಪಿಜೆ ಸೂರ್ಯವೀರ್ ಎಂಬ 740 ಅಡಿ ಉದ್ದದ ಭಾರತೀಯ ಹಡಗು ಚೀನಾದಿಂದ ಅಮೆರಿಕಾದ ಪೋರ್ಟ್ಲೆಂಡ್ನತ್ತ ತೆರಳುತ್ತಿದ್ದಾಗ ಕೆಟ್ಟ ಹವಾಮಾನ ಮತ್ತು ಸಾಗರದಲ್ಲಿನ ಭೀಕರ ಅಲೆಗಳ ಕಾರಣದಿಂದಾಗಿ ಪ್ರಯಾಣ ಸಾಧ್ಯವಾಗದೆ ಸಾಗರ ಮಧ್ಯದಲ್ಲೇ ಭಾನುವಾರ ಕೆಟ್ಟು ನಿಂತಿತ್ತು.
ಸೋಮವಾರ ಬೆಳಿಗ್ಗೆ ಉಪಗ್ರಹ ದೂರವಾಣಿಯ ಮೂಲಕ ಹಡಗಿನ ಸಿಬ್ಬಂದಿ ಕರಾವಳಿ ಪಡೆಗೆ ಅಪಾಯದ ಸಂಕೇತಗಳನ್ನು ನೀಡಿದ್ದರು. ಬಳಿಕ ಅಮೆರಿಕಾ ತಟರಕ್ಷಣಾ ಪಡೆಯು ಸಮರಿಥನ್ ಎಂಬ ಹಡಗನ್ನು ಹಾಗೂ ವಿಮಾನವೊಂದನ್ನು ಕಳುಹಿಸಿ ಸಿಬ್ಬಂದಿಗಳ ರಕ್ಷಣೆಗೆ ಯತ್ನಿಸಿತ್ತು.
ತಡರಾತ್ರಿ ಹಡಗನ್ನು ದುರಸ್ತಿ ಮಾಡಲಾಗಿದೆ. ಹಡಗಿನ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಸೂರ್ಯವೀರ್ ಹಡಗು ಪೋರ್ಟ್ಲೆಂಡ್ ತಲುಪುವವರೆಗೆ ನಾವು ಹಡಗಿನೊಂದಿಗೆ ನಿರಂತರ ರೇಡಿಯೋ ಸಂಪರ್ಕದಲ್ಲಿರುತ್ತೇವೆ ಎಂದು ಆಲಸ್ಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಅದರಲ್ಲಿದ್ದ ಸಿಬ್ಬಂದಿಗಳು ಕೂಡ ಗಾಯ ಅಥವಾ ಇನ್ನಿತರ ಯಾವುದೇ ಅಪಾಯಕ್ಕೊಳಗಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.