ಇಸ್ಲಾಮಾಬಾದ್, ಮಂಗಳವಾರ, 22 ಡಿಸೆಂಬರ್ 2009( 18:28 IST )
ಇತ್ತೀಚೆಗಷ್ಟೇ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ ರದ್ದುಗೊಂಡ ಕ್ಷಮಾದಾನ ನೀಡುವ ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಮಸೂದೆಯನ್ನು ಜಾರಿಗೊಳಿಸಿದ್ದು ತಾನು ತೆಗೆದುಕೊಂಡಿದ್ದ ತಪ್ಪು ನಿರ್ಧಾರ ಎಂದು ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್ ಒಪ್ಪಿಕೊಂಡಿದ್ದಾರೆ.
ಕಳೆದ ವಾರವಷ್ಟೇ ಪಾಕಿಸ್ತಾನದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಮಸೂದೆಯನ್ನು ರದ್ದುಗೊಳಿಸಿ, ಹಲವು ಪ್ರಕರಣಗಳಲ್ಲಿ ಕ್ಷಮಾದಾನದ ಮೂಲಕ ಜೀವದಾನ ಪಡೆದುಕೊಂಡಿದ್ದವರನ್ನು ಮತ್ತೆ ನ್ಯಾಯಾಲಯದ ಮೆಟ್ಟಿಲು ಹತ್ತಿಸಿತ್ತು.
ನ್ಯಾಯಾಲಯದ ಈ ನಿರ್ಧಾರದಿಂದಾಗಿ ಕಳೆದ ವರ್ಷದ ಮಹಾ ಚುನಾವಣೆಯ ಬಳಿಕ ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಕಂಡು ಬಂದಿರುವ ಅತೀ ಕೆಟ್ಟ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಶರಫ್ ಜಾರಿಗೆ ತಂದಿದ್ದ ಮಸೂದೆಯ ಕಾರಣದಿಂದ ತಮ್ಮ ಪ್ರಕರಣಗಳಿಂದ ಕ್ಷಮಾದಾನ ಪಡೆದುಕೊಂಡಿದ್ದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಅವರ ಆಪ್ತರು ಸೇರಿದಂತೆ ಸುಮಾರು 8,000 ಮಂದಿ ಇದೀಗ ಶಿಕ್ಷೆಯ ಭೀತಿಯನ್ನೆದುರಿಸುತ್ತಿದ್ದಾರೆ.
ಮಸೂದೆಯಿಂದ ಲಾಭ ಪಡೆಯುವ ರಾಜಕೀಯ ನಾಯಕರುಗಳ ಲಜ್ಜೆಗೆಟ್ಟ ಪ್ರಬಲ ಸಲಹೆಗಳ ಹಿನ್ನಲೆಯಲ್ಲಿ ನಾನು ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೆ. ಇದು ನಾನು ಮಾಡಿದ ತಪ್ಪು ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಮುಶರಫ್ ಇದೀಗ ಹೇಳಿಕೆ ನೀಡಿದ್ದಾರೆ.
ಯಾವುದೇ ದುರುದ್ದೇಶವಿಲ್ಲದೆ, ಖಡಾಖಂಡಿತವಾಗಿ ವೈಯಕ್ತಿಕ ನಿಲುವುಗಳನ್ನು ಹೊಂದಿಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೆ ಎಂದು ಸಾಮಾಜಿಕ ಸಂಪರ್ಕ ತಾಣ 'ಫೇಸ್ಬುಕ್'ನಲ್ಲಿನ ತನ್ನ ಪುಟದಲ್ಲಿ ಬರೆದುಕೊಂಡಿದ್ದಾರೆ.