ಇಸ್ಲಾಮಾಬಾದ್, ಬುಧವಾರ, 23 ಡಿಸೆಂಬರ್ 2009( 10:51 IST )
ಬಗೆಹರಿಯದ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲು ಮುಂದಾಗುವಂತೆ ಭಾರತವನ್ನು ಒಪ್ಪಿಸುವ ಅಗತ್ಯವಿದೆ ಎಂದು ವಿಶ್ವಕ್ಕೆ ಕರೆ ನೀಡಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಇದರಿಂದಾಗಿ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧದ ಸಮರದ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಮುಂಬೈ ದಾಳಿಯ ನಂತರ ಸ್ಥಗಿತಗೊಂಡಿರುವ ಉಭಯ ದೇಶಗಳ ನಡುವಿನ ಮಾತುಕತೆಯನ್ನು ಪುನರಾರಂಭಿಸಬೇಕೆಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಗಾಗ ಒತ್ತಾಯಿಸುವ ಗಿಲಾನಿ, ಫ್ರಾನ್ಸ್ ರಕ್ಷಣಾ ಮುಖ್ಯಸ್ಥ ಜನರಲ್ ಜೀನ್ ಲೂಯಿಸ್ ಜಾರ್ಜ್ಲಿನ್ರನ್ನು ಸ್ವದೇಶದಲ್ಲಿ ಭೇಟಿಯಾದ ಸಂದರ್ಭದಲ್ಲಿ ತನ್ನ ಮಾತನ್ನು ಪುನರುಚ್ಛರಿಸಿದ್ದಾರೆ.
ದಕ್ಷಿಣ ಏಷಿಯಾ ಪ್ರಾಂತ್ಯದಲ್ಲಿನ ಶಾಂತಿಗಾಗಿ ಕಾಶ್ಮೀರ ವಿವಾದ ಸೇರಿದಂತೆ ಉಭಯ ದೇಶಗಳ ನಡುವಿನ ಮಹತ್ವದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಪುನರಾರಂಭ ಅಗತ್ಯ; ಅದಕ್ಕಾಗಿ ವಿಶ್ವ ಸಮುದಾಯವು ಭಾರತವನ್ನು ಒಪ್ಪಿಸಬೇಕು. ಹಾಗಾದಲ್ಲಿ ಭಯೋತ್ಪಾದನೆ ವಿರುದ್ಧದ ತಮ್ಮ ಹೋರಾಟದಲ್ಲಿ ಹೆಚ್ಚಿನ ಗಮನ ನೀಡಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ತನ್ನ ಕಚೇರಿಯಿಂದ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಗಿಲಾನಿ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಅಪಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಯಾಗುವುದು ಪಾಕಿಸ್ತಾನದ ಸ್ವಂತ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯಾಗಿದ್ದು, ಪಾಕಿಸ್ತಾನ ಹಾಗೂ ನ್ಯಾಟೋ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸಹಕಾರಿ ಪಡೆಗಳ ನಡುವೆ ಹೆಚ್ಚೆಚ್ಚು ಗುಪ್ತಚರ ವರದಿಗಳನ್ನು ಹಂಚಿಕೊಳ್ಳುವುದು ಮತ್ತು ಸಹಕಾರ ವೃದ್ಧಿಯಾಗಬೇಕು ಎಂದು ಕರೆ ನೀಡಿದ ಗಿಲಾನಿ, ಎರಡೂ ದೇಶಗಳಲ್ಲಿರುವ ದುಷ್ಟ ಶಕ್ತಿಗಳ ಕಾರ್ಯತಂತ್ರಗಳನ್ನು ವಿಫಲಗೊಳಿಸಲು ಇಂತಹ ಕ್ರಮಗಳ ಅಗತ್ಯವಿರುವುದನ್ನೂ ಒತ್ತಿ ಹೇಳಿದ್ದಾರೆ.
ಅದೇ ಹೊತ್ತಿಗೆ ಪಾಕಿಸ್ತಾನ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಮತ್ತು ಆರ್ಥಿಕ ಸಂಬಂಧಗಳು ವೃದ್ಧಿಯಾಗಬೇಕೆಂದು ಗಿಲಾನಿ ಅಭಿಪ್ರಾಯಪಟ್ಟಿದ್ದಾರೆ. ಫ್ರೆಂಚ್ ಸರಕಾರವು ಆಧುನಿಕ ಯುದ್ಧ ಪರಿಕರಗಳನ್ನು ನೀಡುವ ಮೂಲಕ ಭಯೋತ್ಪಾದನೆ ವಿರುದ್ಧದ ಪಾಕಿಸ್ತಾನದ ಹೋರಾಟವನ್ನು ಬೆಂಬಲಿಸಬೇಕೆಂದು ಕೋರಿದರು.