ನೇಪಾಳದ ರಾಜವಂಶಸ್ಥರ ನರಮೇಧ ಪ್ರಕರಣದಲ್ಲಿ ಪದಚ್ಯುತ ದೊರೆ ಜ್ಞಾನೇಂದ್ರ ಮತ್ತು ಪುತ್ರ ಪರಸ್ ಭಾಗಿಯಾಗಿದ್ದಾರೆಂದು ರಾಜವಂಶಸ್ಥರ ಅಂಗರಕ್ಷಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ದೂರಿದ್ದಾನೆ.
ದೊರೆ ಬೀರೇಂದ್ರ ಮತ್ತು ಅವರ ಕುಟುಂಬದ ಹತ್ಯೆಯ ಹಿಂದೆ ಜ್ಞಾನೇಂದ್ರ ಅವರ ಕೈವಾಡ ಇರುವುದಾಗಿ ಆತ ನೇರವಾಗಿ ಆರೋಪಿಸಿದ್ದಾನೆ.
2001ರಲ್ಲಿ ದೊರೆ ಬೀರೇಂದ್ರ ಮತ್ತು ಕುಟುಂಬದ ಹಲವಾರು ಸದಸ್ಯರನ್ನು ಯುವರಾಜ ದೀಪೇಂದ್ರ ಬರ್ಬರವಾಗಿ ಹತ್ಯೆಗೈದಿದ್ದ. ಮದ್ಯಪಾನ ಮತ್ತು ಅಮಲು ಪದಾರ್ಥ ಸೇವನೆಯಿಂದಾಗಿ ಆತ ಈ ಕೃತ್ಯ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಆದರೆ, ನೇಪಾಳ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ತಾನು ದೊರೆ ಬೀರೇಂದ್ರ ಕುಟುಂಬದ ಮಾಜಿ ಅಂಗರಕ್ಷಕನಾಗಿದ್ದು, ಅರಮನೆಯಲ್ಲಿ ನಡೆದ ನರಮೇಧ ಪ್ರಕರಣದಲ್ಲಿ ದೊರೆ ಬೀರೇಂದ್ರ ಕುಟುಂಬ ಮತ್ತು ಪುತ್ರ ಪರಸ್ ಶಾಮೀಲಾಗಿದ್ದಾರೆ ಎಂದು ಹೇಳಿದ್ದಾನೆ.
ದಂಪತಿಗಳನ್ನು ಕೊಂದ ಆರೋಪದಲ್ಲಿ ಬಿರ್ಗುಂಜ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲ್ ಬಹದೂರ್ ಮಾಗರ್ ಎಂಬಾತ ಈ ವಿಷಯ ಬಹಿರಂಗಪಡಿಸಿದ್ದಾನೆ. ಅರಮನೆಯಲ್ಲಿ ನಡೆದ ನರಮೇಧದ ಪ್ರತ್ಯಕ್ಷ ಸಾಕ್ಷಿ ತಾನು ಎಂದು ಹೇಳಿಕೊಂಡಿದ್ದಾನೆ ಎಂದು ಕಾಠ್ಮಂಡು ಪೋಸ್ಟ್ ಆನ್ಲೈನ್ ನ್ಯೂಸ್ ಪೋರ್ಟಲ್ ವರದಿ ತಿಳಿಸಿದೆ.