ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋರವರ ಹತ್ಯೆಯ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಜನರಲ್ ಫರ್ವೇಜ್ ಮುಶರಫ್ ಸಹಕಾರವಿಲ್ಲದೆ 'ತೆಹರಿಕ್ ಇ ತಾಲಿಬಾನ್ ಪಾಕಿಸ್ತಾನ್' ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿರಲಿಲ್ಲ ಎಂದು ಬ್ರಿಟನ್ನಲ್ಲಿನ ಪಾಕಿಸ್ತಾನ ರಾಯಭಾರಿ ವಾಜಿದ್ ಸಾಮ್ಸುಲ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಖಾಸಗಿ ಟೀವಿ ಚಾನೆಲ್ ಒಂದಕ್ಕೆ ನೀಡುರುವ ಸಂದರ್ಶನದಲ್ಲಿ ಹಸನ್ ಈ ವಿಚಾರವನ್ನು ಹೇಳಿದ್ದು, ಬೆನಜೀರ್ ಬದುಕುಳಿಯುತ್ತಿದ್ದರೆ, ಮುಶರಫ್ರಿಗೆ ತೊಂದರೆಗಳು ಹೆಚ್ಚಾಗುತ್ತಿದ್ದವು ಎಂದಿದ್ದಾರೆಂದು ಚಾನೆಲ್ ವರದಿ ಮಾಡಿದೆ.
ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಶರಫ್ ಒಪ್ಪಿಗೆ ಸೂಚಿಸದೇ ಇರುತ್ತಿದ್ದರೆ ಮೆಹ್ಸೂದ್ಗೆ ಭುಟ್ಟೋರನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದು, ಮಾಜಿ ಮಿಲಿಟರಿ ಮುಖ್ಯಸ್ಥ ಭುಟ್ಟೋ ಹತ್ಯೆಯಲ್ಲಿ ಪರೋಕ್ಷ ಪಾತ್ರವಹಿಸಿದ್ದಾರೆ ಎಂಬ ಆರೋಪಗಳಿಗೆ ಇದೀಗ ಮತ್ತಷ್ಟು ಪುಷ್ಠಿ ದೊರೆತಂತಾಗಿದೆ.
ಬೆನಜೀರ್ ಬದುಕಿರುತ್ತಿದ್ದರೆ ಬಲೂಚಿಸ್ತಾನದ ಮಾಜಿ ರಾಜ್ಯಪಾಲ ನವಾಬ್ ಅಕ್ಬರ್ ಭುಕ್ತಿಯವರ ಹತ್ಯೆ ಮತ್ತು ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಿದ ಕ್ರಮಕ್ಕೆ ಕಾನೂನು ಕ್ರಮವನ್ನು ಮುಶರಫ್ ಎದುರಿಸಬೇಕಾಗಿತ್ತು ಎಂದು ಹಸನ್ ಹೇಳಿದ್ದಾರೆಂದು 'ದಿ ಡೈಲಿ ಟೈಮ್ಸ್' ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ಅಲ್ಲದೆ 1998ರ ಮಿಲಿಟರಿ ಹಗರಣದಲ್ಲಿ ಸಿಲುಕಿದ್ದ ಪಾಕಿಸ್ತಾನ ಮುಸ್ಲಿಮ್ ಲೀಗ್ (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಶರೀಫ್ ದೇಶ ಬಿಟ್ಟು ಹೋಗಲು ಅನುವಾಗುವಂತೆ ಮುಶರಫ್, ರಾಷ್ಟ್ರೀಯ ವ್ಯಾಜ್ಯ ವಿಲೇವಾರಿ ಮುಖಾಂತರ ದೊಡ್ಡ ಮಟ್ಟದ ಕ್ಷಮಾದಾನ ನೀಡಿದ್ದರು ಎಂದೂ ಹಸನ್ ತಿಳಿಸಿದ್ದಾರೆ.