ಇಸ್ಲಾಮಾಬಾದ್, ಮಂಗಳವಾರ, 29 ಡಿಸೆಂಬರ್ 2009( 12:11 IST )
ಭಾರತದಲ್ಲಿ ಅಲ್ಪಸಂಖ್ಯಾತರಿಗೆ ದೊರೆಯುತ್ತಿರುವ ಸೌಲಭ್ಯಕ್ಕೆ ಹೋಲಿಸಿದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಅವರಿಗೆ ಜಾಡಮಾಲಿ (ಕಸಗುಡಿಸುವವ)ಯಂತಹಾ ಕೆಳ ದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ.
ಅಲ್ಪಸಂಖ್ಯಾತರಿಗೆ ಎಲ್ಲ ಸರಕಾರಿ ಇಲಾಖೆಗಳಲ್ಲಿ ಶೇ.5 ಮೀಸಲಾತಿ ನೀಡುವುದಾಗಿ ಪಾಕಿಸ್ತಾನ ಸರಕಾರ ಘೋಷಿಸಿದ್ದರೂ, ಈ ತಾರತಮ್ಯ ನೀತಿಯು ಇನ್ನೂ ಮುಂದುವರಿಯುತ್ತಿದೆ.
ವಿತ್ತ ಇಲಾಖೆಯಲ್ಲಿ ಇತ್ತೀಚೆಗೆ ನೇಮಕಾತಿ ಮಾಡಿಕೊಂಡಿರುವ ಪಟ್ಟಿಯನ್ನು ನೋಡಿದರೆ, 21 ಜಾಡಮಾಲಿಗಳ ಹುದ್ದೆಯೆಲ್ಲವನ್ನೂ (ಬಿಪಿಎಸ್-01 ದರ್ಜೆ) ಕ್ರಿಶ್ಚಿಯನ್ನರಿಗೆ ಮತ್ತು ಹಿಂದೂಗಳಿಗೆ ನೀಡಲಾಗಿದೆಯೇ ಹೊರತು ಇತರ ಬಿಪಿಎಸ್-01 ದರ್ಜೆಯ ಚೌಕೀದಾರ ಮತ್ತು ನಾಯಿಬ್-ಖಾಸಿದ್ ಹುದ್ದೆಗಳನ್ನು ಒಬ್ಬರಿಗೂ ನೀಡಲಾಗಿಲ್ಲ. ಅವೆಲ್ಲವೂ ಅಲ್ಲಿನ ಬಹುಸಂಖ್ಯಾತರ ಪಾಲಾಗಿದೆ.
ಕೆಳ ದರ್ಜೆಯ ನೌಕರಿಯಲ್ಲೇ ಕೆಳ ದರ್ಜೆಯನ್ನು ಅಲ್ಪಸಂಖ್ಯಾತರಿಗೆ ಇಲ್ಲಿ ನೀಡಲಾಗುತ್ತಿದೆ. ಇಲ್ಲಿನ ಸರಕಾರದ ಉದ್ಯೋಗ ನೀಡುವ ಈ ನೀತಿಗಳು ಕ್ರಿಶ್ಚಿಯನ್ ಮತ್ತು ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿವೆ.
ನನ್ನ ಪದವಿಗಿಲ್ಲಿ ಬೆಲೆಯೇ ಇಲ್ಲ. ಇಲ್ಲಿನ ಉದ್ಯೋಗ ಮೀಸಲಾತಿಯನ್ನು ಕಂಡು ಖುಷಿಪಟ್ಟ ನಾನು ತಕ್ಷಣವೇ ಗುಮಾಸ್ತ ಹುದ್ದೆಗೆ ಅರ್ಜಿ ದಾಖಲಿಸಿದ್ದೆ. ಆದರೆ ನನ್ನ ಭರವಸೆಗಳಿಗೆ ಬೆಂಕಿ ಹಾಕಿದ ಇಲ್ಲಿನ ಸರಕಾರ ನನಗೆ ನೀಡಿದ್ದು ಕಸ ಗುಡಿಸುವ ಕೆಲಸ ಎಂದು 25ರ ಹರೆಯದ ಜಾಡಮಾಲಿಯೊಬ್ಬರು ಹೇಳುತ್ತಾರೆ.
ಈ ಬಗ್ಗೆ ಪಾಕಿಸ್ತಾನದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮೋಹನ್ ಲಾಲ್ ಅವರನ್ನು ಪ್ರಶ್ನಿಸಿದಾಗ, ಅವರಲ್ಲಿ ಔದಾಸಿನ್ಯವೇ ಮನೆ ಮಾಡಿರುವುದು ಕಂಡು ಬಂದಿದೆ.
ಇಲ್ಲಿ ಅಲ್ಪಸಂಖ್ಯಾತರು ಮಾತ್ರ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಯಾಕೆಂದರೆ ಆ ಕೆಲಸ ಮಾಡಲು ಇಲ್ಲಿನ ಮುಸ್ಲಿಮರು ಆಸಕ್ತಿ ತೋರಿಸುತ್ತಿಲ್ಲ. ಆದರೂ ನಮ್ಮ ಜನ ಈ ಕೆಲಸವನ್ನು ನಿರಾಕರಿಸಿದಲ್ಲಿ, ಅವರು (ಮುಸ್ಲಿಮರು) ಅದಕ್ಕೂ ಸಿದ್ಧರಿದ್ದಾರೆ. ಏಕೆಂದರೆ ಕೊನೆಗೆ ಇಲ್ಲಿ ಎದುರಾಗುವ ಪ್ರಶ್ನೆಯೆಂದರೆ ಹೊಟ್ಟೆಪಾಡು ಎನ್ನುತ್ತಾರೆ ಮೋಹನ್ ಲಾಲ್.