ಇಸ್ಲಾಮಾಬಾದ್, ಬುಧವಾರ, 30 ಡಿಸೆಂಬರ್ 2009( 17:38 IST )
ಕರಾಚಿಯಲ್ಲಿ ಮೊಹರಂ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ನಡೆದ ಆತ್ಮಹತ್ಯಾ ದಾಳಿ ಮತ್ತು ಬಳಿಕ ನಡೆದ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡವಿದೆ ಎಂದು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ಶಿಯಾ ಮುಸ್ಲಿಮರು ನಡೆಸುತ್ತಿದ್ದ ಮೊಹರಂ ಮೆರವಣಿಗೆ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ ಪರಿಣಾಮ 40 ಮಂದಿಯ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದು ಇಲ್ಲಿನ ಮಾರುಕಟ್ಟೆಯ ನೂರಾರು ಅಂಗಡಿಗಳು ಅಗ್ನಿಗಾಹುತಿಯಾಗಿದ್ದವು.
ಧರ್ಮದೊಳಗಿನ ಹಿಂಸಾಚಾರವನ್ನು ಆರಂಭಿಸುವ ಪಿತೂರಿ ಕರಾಚಿ ಘಟನೆ. ಭಯೋತ್ಪಾದನೆಯನ್ನು ನಿಭಾಯಿಸುವ ಪ್ರಸಕ್ತ ಸರಕಾರದ ನೀತಿಗಳು ಸಂಪೂರ್ಣವಾಗಿ ವಿಫಲಗೊಂಡಿವೆ. ಈಗ ಭಯೋತ್ಪಾದನೆ ದೇಶದಾದ್ಯಂತ ಪಸರಿಸಿದೆ ಎಂದು ಖಾನ್ ಹೇಳಿದ್ದಾರೆಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಅದೇ ಹೊತ್ತಿಗೆ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ಖಾನ್, ಪ್ರಜೆಗಳಿಗೆ ರಕ್ಷಣೆ ಒದಗಿಸಲು ಆಡಳಿತ ವಿಫಲವಾಗಿದೆ ಎಂದು ದೂರಿದ್ದಾರೆ.
ಕರಾಚಿ ಸ್ಫೋಟದ ಬಳಿಕ ನಡೆದ ಹಿಂಸಾಚಾರದಲ್ಲಿ 400 ಅಂಗಡಿಗಳು ಹಾಗೂ 50ಕ್ಕೂ ಹೆಚ್ಚು ವಾಹನಗಳು ಉದ್ರಿಕ್ತ ಗುಂಪಿಗೆ ಆಹುತಿಯಾಗಿತ್ತು. ಇದರಿಂದಾಗಿ ಸುಮಾರು 30 ಬಿಲಿಯನ್ ಡಾಲರ್ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.