ನೇಪಾಳ ಚರ್ಚ್, ಮಸೀದಿ ಧ್ವಂಸಕ್ಕೆ ಆರೆಸ್ಸೆಸ್, ವಿಎಚ್ಪಿ ಸಹಾಯ
ಕಾಠ್ಮಂಡು, ಬುಧವಾರ, 30 ಡಿಸೆಂಬರ್ 2009( 18:09 IST )
ನೇಪಾಳದ ಚರ್ಚ್ ಮತ್ತು ಮಸೀದಿಗಳ ಮೇಲಿನ ದಾಳಿಗೆ ಭಾರತದ ವಿಎಚ್ಪಿ, ಆರೆಸ್ಸೆಸ್, ಭಜರಂಗದಳ ಮತ್ತು ಉಲ್ಫಾ ಉಗ್ರಗಾಮಿ ಸಂಘಟನೆ ಹಣಕಾಸು ನೆರವು ನೀಡಿದ್ದವು ಎಂದು ಬಾಂಬ್ ದಾಳಿಯ ರೂವಾರಿ ರಾಮ್ ಪ್ರಸಾದ್ ಮೈನಾಲಿ ಬಹಿರಂಗಪಡಿಸಿದ್ದಾನೆ
ಟಿಕೆಟ್ ಬುಕ್ಕಿಂಗ್ ಗುಮಾಸ್ತನಾಗಿದ್ದ ಮೈನಾಲಿ ಕ್ರೂರಿಯಾಗಿ ಪರಿವರ್ತನೆಗೊಂಡು ಚರ್ಚ್ ಮತ್ತು ಮಸೀದಿಗಳ ಮೇಲೆ ದಾಳಿ ಸಂಚು ರೂಪಿಸಿ ಐವರ ಸಾವಿಗೆ ಕಾರಣನಾಗಿದ್ದ. ಈತನಿಗೆ ಭಾರತದ ಕನಿಷ್ಠ ನಾಲ್ಕು ಸಂಘಟನೆಗಳು ಹಣಕಾಸು ಸಹಾಯ ಮಾಡಿವೆ ಎಂದು ಹೇಳಲಾಗಿದೆ.
ನೇಪಾಳವು ಜಾತ್ಯತೀತ ಪ್ರಜಾಸತ್ತಾತ್ಮಕ ದೇಶವಾಗುವುದನ್ನು ನಾನು ವಿರೋಧಿಸಿದ್ದೆ. ನಮ್ಮಲ್ಲಿ 50ಕ್ಕೂ ಹೆಚ್ಚು ಕ್ರಿಶ್ಚಿಯನ್ ಮತ್ತು 40ಕ್ಕೂ ಹೆಚ್ಚು ಇಸ್ಲಾಮಿಕ್ ದೇಶಗಳಿವೆ. ಆದರೆ ಹಿಂದೂ ದೇಶವೊಂದಿದ್ದರೆ ಅದು ನೇಪಾಳ ಮಾತ್ರ ಎಂದು ಮೈನಾಲಿ ಜೈಲಿನಿಂದಲೇ ನೀಡಿರುವ ಸಂದರ್ಶನದಲ್ಲಿ ಆತ ಹೇಳಿದ್ದಾನೆ.
ವಿಶ್ವ ಏಕೈಕ ಹಿಂದೂ ರಾಜಮನೆತನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಭಾರತದ ಹಿಂದೂ ನಾಯಕರನ್ನು 2007ರಲ್ಲಿ ಭೇಟಿಯಾಗಿದ್ದೆ. ವಿಶ್ವ ಹಿಂದೂ ಪರಿಷತ್, ಶಿವಸೇನಾ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಜರಂಗ ದಳದ ಮುಖ್ಯಸ್ಥರು ಈ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದರು ಎಂದು ಆತ ಹೇಳಿಕೊಂಡಿದ್ದಾನೆ.
ಅಲ್ಲದೆ ಭಾರತೀಯ ಸಂಘಟನೆಗಳು ನಮಗೆ ಪ್ರತೀ ತಿಂಗಳು ಸುಮಾರು ಎರಡು ಲಕ್ಷದಿಂದ ಐದು ಲಕ್ಷ ರೂಪಾಯಿಗಳನ್ನು ರಹಸ್ಯವಾಗಿ ಕಳುಹಿಸಿಕೊಡುತ್ತಿದ್ದರು ಎಂದು ತಿಳಿಸಿದ್ದಾನೆ.
ಆದರೆ ನಾನು ಜೈಲಿನಲ್ಲಿರುವಾಗ ಒಬ್ಬನೇ ಒಬ್ಬ ಹಿಂದೂ ನನ್ನನ್ನು ಭೇಟಿಯಾಗಲು ಬರಲಿಲ್ಲ ಎಂದಿರುವ ಆತ ತನ್ನ ಮುಂದಿನ ಹೆಜ್ಜೆಗಳನ್ನು ಬಹಿರಂಗಪಡಿಸಿಲ್ಲ. ಹೋರಾಟ ಮುಂದುವರಿಸುವ ಕುರಿತು ಕೂಡ ಯಾವುದೇ ಸ್ಪಷ್ಟ ನಿರ್ಧಾರವನ್ನು ತಿಳಿಸಿಲ್ಲ.