ತಾನು ಪಾಕಿಸ್ತಾನಿ ಮಿಲಿಟರಿಯಿಂದ ಪಲಾಯನಗೈದಿರುವ ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ತಾನು ಪಾಕಿಸ್ತಾನಕ್ಕೆ ಮರಳಲಾರೆ ಎಂದು ಮುಂಬೈ ದಾಳಿ ಸಂಚಿನ ಆರೋಪಿಗಳಲ್ಲಿ ಒಬ್ಬನಾಗಿರುವ ಪಾಕಿಸ್ತಾನಿ ಮೂಲದ ಶಂಕಿತ ಕೆನಡಾ ಉಗ್ರ ತಹವೂರ್ ರಾಣಾ ಜಾಮೀನಿಗಾಗಿ ಚಿಕಾಗೋ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾನೆ.
ರಾಣಾ ಪಾಕಿಸ್ತಾನದ ಮಿಲಿಟರಿಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆ ಸಂದರ್ಭದಲ್ಲಿ ರಾಣಾಗೆ ಅನಾರೋಗ್ಯ ಕಾಡುತ್ತಿದ್ದರಿಂದ ಚಿಕಿತ್ಸೆಗಾಗಿ ರಜೆಯನ್ನು ನೀಡಲಾಗಿತ್ತು. ಆ ಸಮಯದಲ್ಲೇ ಇಂಗ್ಲೆಂಡ್ಗೆ ತಾನು ಮಿಲಿಟರಿಯಲ್ಲಿನ ವೈದ್ಯ ವೃತ್ತಿ ತೊರೆದು ಪಲಾಯನಗೈದಿರುವುದಾಗಿ ಅರ್ಜಿಯಲ್ಲಿ ವಿವರಿಸಿರುವ ರಾಣಾ, ಮತ್ತೆ ಪಾಕ್ಗೆ ತೆರಳಲಾರೆ ಎಂದಿದ್ದಾನೆ.
ತಾನು ಮತ್ತೆ ಪಾಕಿಸ್ತಾನಕ್ಕೆ ತೆರಳಿದರೆ ತನ್ನನ್ನು ಕೋರ್ಟ್ ಮಾರ್ಷಲ್ಗೆ ಗುರಿಪಡಿಸುವ ಸಾಧ್ಯತೆ ಇರುವುದಾಗಿಯೂ ಅಲವತ್ತುಕೊಂಡಿದ್ದಾನೆ. ಮುಂಬೈ ದಾಳಿ ಸಂಚಿನಲ್ಲಿ ತನ್ನ ಪಾತ್ರವಿಲ್ಲ, ತನ್ನನ್ನು ಅನಾವಶ್ಯಕವಾಗಿ ಬಲಿಪಶು ಮಾಡಲಾಗಿದೆ ಎಂದು ಜಾಮೀನಿಗಾಗಿ ಚಿಕಾಗೋ ಕೋರ್ಟ್ಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಆದರೆ ನ್ಯಾಯಾಲಯ ರಾಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ತಿರಸ್ಕರಿಸಿ, ಮುಂಬೈ ದಾಳಿ ಕುರಿತಂತೆ ಆರೋಪ ಪಟ್ಟಿ ದಾಖಲಾಗಿರುವುದರಿಂದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.