ಮಕ್ಕಳು ಸೇರಿದಂತೆ ಸುಮಾರು 745 ಎಲ್ಟಿಟಿಇಯ ಮಾಜಿ ಸೈನಿಕರನ್ನು ಬಿಡುಗಡೆ ಮಾಡಿರುವುದಾಗಿ ಶ್ರೀಲಂಕಾ ಸರ್ಕಾರ ಶನಿವಾರ ತಿಳಿಸಿದೆ.
ಮೂರು ದಶಕಗಳ ನಿರಂತರ ಹೋರಾಟದ ನಂತರ ಎಲ್ಟಿಟಿಇಯನ್ನು ಲಂಕಾ ಮಿಲಿಟರಿ ಬಗ್ಗುಬಡಿದಿತ್ತು. ಈ ಸಮರದಲ್ಲಿ ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹತನಾಗುವ ಮೂಲಕ ತಮಿಳು ಟೈಗರ್ಗಳ ಹೋರಾಟ ಅಂತ್ಯಗೊಂಡಿತ್ತು. ಆ ಸಂದರ್ಭದಲ್ಲಿ 80ಸಾವಿರ ಮಂದಿಯನ್ನು ಸೆರೆ ಹಿಡಿಯಲಾಗಿತ್ತು.
ವಾಯುನಿಯಾ ಜಿಲ್ಲೆಯಲ್ಲಿನ ಸುಮಾರು 745ಎಲ್ಟಿಟಿಇ ಮಾಜಿ ಸೈನಿಕರನ್ನು ಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ ಬಿಡುಗಡೆಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ ಸೈನಿಕರು ಸೇರಿದಂತೆ 745ಸೈನಿಕರನ್ನು ಬಿಡುಗಡೆ ಮಾಡಲಾಗಿದ್ದು, ಅವರ ಪೋಷಕರಿಗೆ ಪುನರ್ ವಸತಿ ಕಲ್ಪಿಸಿಕೊಟ್ಟು ಉದ್ಯೋಗವನ್ನು ನೀಡಲಾಗುವುದು ಎಂದು ಲಂಕಾ ಸರ್ಕಾರ ಈ ಸಂದರ್ಭದಲ್ಲಿ ಭರವಸೆ ನೀಡಿದೆ.