ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಪ್ರಥಮವಾಗಿ ನೇಪಾಳಕ್ಕೆ ಭೇಟಿ ನೀಡುತ್ತಿರುತ್ತಿರುವ ಸಂದರ್ಭದಲ್ಲಿಯೇ, ನೇಪಾಳದ ಪ್ರದೇಶವನ್ನು ನೆರೆಯ ಭಾರತ ಕಬಳಿಸುತ್ತಿದೆ ಎಂದು ಆರೋಪಿಸಿರುವ ಮಾವೋವಾದಿ ಗೆರಿಲ್ಲಾ ಪಡೆ ಭಾರತ ವಿರೋಧಿ ಹೋರಾಟಕ್ಕೆ ಕರೆ ನೀಡಿದೆ.
ಮಹಾಕಾಳಿ ಸರೋವರದ ಸಮೀಪ ಭಾರತ ಟನಾಕ್ಪುರ್ ಬ್ಯಾರೇಜ್ ಅನ್ನು ನಿರ್ಮಿಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿರುವ ಮಾವೋವಾದಿ ವರಿಷ್ಠ, ನೇಪಾಳದ ಮಾಜಿ ಪ್ರದಾನಿ ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ, ಕಾಂಚನ್ಪುರದಲ್ಲಿ ಪ್ರತಿಭಟನಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ, ಈ ಬಗ್ಗೆ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಘೋಷಿಸಿದರು.
ಆ ನಿಟ್ಟಿನಲ್ಲಿ ನೇಪಾಳದ ಸಮಗ್ರತೆಯನ್ನು ರಕ್ಷಿಸುವ ನೂತನ ಚಳವಳಿಯ ಪ್ರಚಾರ ಕೈಗೊಳ್ಳಲು ತಮ್ಮ ಪಕ್ಷ ಮುಂದಾಗಿರುವುದಾಗಿ ಹೇಳಿದ್ದು,ವಿದೇಶಿ ಶಕ್ತಿಗಳ ಕೈವಾಡದಿಂದ ಪ್ರಸಕ್ತ ಆಡಳಿತಾರೂಢ ನೇಪಾಳ ಸರ್ಕಾರ ಅದಕ್ಕೆ ಕುಮ್ಮಕ್ಕು ನೀಡುತ್ತಿರುವುದಾಗಿ ಆರೋಪಿಸಿದರು.