ಇಂಡೋ-ಬಾಂಗ್ಲಾ ಗಡಿ ವಿವಾದ ಸಂಬಂಧ ಮೇಘಾಲಯ ಸರ್ಕಾರ ನಿಧಾನ ಗತಿಯ ಸಹಕಾರ ನೀಡುತ್ತಿದ್ದು, ಬಂಡುಕೋರರು ಗಡಿ ಭೇದಿಸಿ ಒಳನುಸುಳಲು ಯತ್ನಿಸಿದಾಗ ಸೂಕ್ತ ಮಾಹಿತಿ ನೀಡಲು ವಿಫಲವಾಗಿದೆ ಎಂದು ಗಡಿಭದ್ರತಾ ಪಡೆಯ ಯೋಧರು ಆರೋಪಿಸಿದ್ದಾರೆ.
ನಕ್ಸಲೀಯರು ಗಡಿ ಭೇದಿಸಿ ಒಳನುಸುಳಲು ಯತ್ನಿಸಿದ್ದನ್ನು ಮೇಘಾಲಯ ಪೊಲೀಸ್ ಅಧಿಕಾರಿ ರಾಜಕೊಂಗಸ್ಟಿ ಗಂಭೀರವಾಗಿ ಪರಿಗಣಿಸದೇ ಯಾವುದೇ ಉಪಯುಕ್ತ ಮಾಹಿತಿ ನೀಡಿರಲಿಲ್ಲ. ಅಲ್ಲದೆ, ಕಳೆದ ತಿಂಗಳು ದವಾತಿಯ ಕಲ್ಲಿದ್ದಲು ರಫ್ತುದಾರನನ್ನು ಕೊಲ್ಲಲು ಬಂಡುಕೋರರು ಸಂಚು ರೂಪಿಸಿದ್ದನ್ನು ಅವರು ಲೆಕ್ಕಿಸಿರಲಿಲ್ಲ ಎಂದು ಬಿಎಸ್ಎಫ್ ಟೀಕಿಸಿದೆ.
ಹೈನಿಕ್ರಿಪ್ ನ್ಯಾಷನಲ್ ಲಿಬರೇಷನ್ ಕೌನ್ಸಿಲ್ ಕಲ್ಲಿದ್ದಲು ರಫ್ತುದಾರರ ಮೇಲೆ ಆಕ್ರಮಣ ಮಾಡುವುದರ ಬಗ್ಗೆ ಅರಿವಿದ್ದರೂ ತಡೆಯುವಲ್ಲಿ ಮೇಘಾಲಯ ಪೊಲೀಸರು ವಿಫಲರಾಗಿದ್ದಾರೆ. ಈವರೆಗೂ ಭಯೋತ್ಪಾದನೆ ಸಂಬಂಧ ಪ್ರಕರಣಗಳ ಬಗ್ಗೆ ಬಿಎಸ್ಎಫ್ ಪಡೆಗೆ ಯಾವುದೇ ಮಾಹಿತಿ ನೀಡದೆ ಇರುವುದರಿಂದ ಉಗ್ರರು ಅಕ್ರಮವಾಗಿ ಗಡಿ ಪ್ರವೇಶಿಸುವುದನ್ನು ತಡೆಯುವಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಬಿಎಸ್ಎಫ್ ವಿವರಿಸಿದೆ.