ಮುಂಬೈ ದಾಳಿ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ಲಾಹೋರ್ ಹೈಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣ ವಿಚಾರಣೆ ಬಾಕಿ ಇರುವುದರಿಂದ ಆರೋಪಿಗಳಾದ ಲಷ್ಕರ್ ಇ ತೋಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧದ ವಿಚಾರಣೆಯನ್ನು ಶನಿವಾರ ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವೊಂದು ವಾರಗಳ ಕಾಲ ಮುಂದೂಡಿದೆ.
ಉಗ್ರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಮಲಿಕ್ ಮೊಹಮ್ಮದ್ ಅಕ್ರಮ್ ಅವಾನ್ ಅವರು ಇಂದು ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲು ಆರಂಭಿಸಬೇಕಿತ್ತು. ಆದರೆ ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಲಖ್ವಿ ಲಾಹೋರ್ ಹೈಕೋರ್ಟ್ನಲ್ಲಿ ದಾವೆ ಹೂಡಿರುವುದರಿಂದ ವಿಚಾರಣೆಯನ್ನು ಜನವರಿ 23ರವರೆಗೆ ನ್ಯಾಯಾಧೀಶ ಅವಾನ್ ಮುಂದೂಡಿದ್ದಾರೆ.
ಪ್ರಕರಣವನ್ನು ಸ್ಥಳಾಂತರಿಸಬೇಕೆಂದು ಲಾಹೋರ್ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಉಳಿದಿರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಆರೋಪಿತರ ವಕೀಲ ಶಾಹ್ಬಾಜ್ ರಜಪೂತ್ ಹೇಳಿದ್ದಾರೆ.
ಸುರಕ್ಷತಾ ವಿಚಾರಗಳ ಕಾರಣಗಳಿಂದಾಗಿ ಭಾರೀ ಭದ್ರತೆಯಿರುವ ರಾವಲ್ಪಿಂಡಿಯಲ್ಲಿನ ಅದಿಯಾಲಾ ಜೈಲಿನಲ್ಲಿ ಈ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ಹಿಂದಿನ ಜನವರಿ 6ರ ವಿಚಾರಣೆ ಸಂದರ್ಭದಲ್ಲಿ ತಮ್ಮನ್ನು ದೋಷಮುಕ್ತಗೊಳಿಸಬೇಕೆಂದು ಏಳು ಆರೋಪಿರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ತಳ್ಳಿ ಹಾಕಿದ್ದರು. ಅಂದು ಫಿರ್ಯಾದಿಗಳಿಗೆ ನಿರ್ದೇಶನ ನೀಡಿದ್ದ ಕೋರ್ಟ್, ಆರೋಪಿತರ ವಿರುದ್ಧದ ಸಾಕ್ಷ್ಯಗಳನ್ನು ಇಂದಿನ ವಿಚಾರಣೆಯಲ್ಲಿ ಹಾಜರುಪಡಿಸುವಂತೆ ಸೂಚಿಸಿತ್ತು.
ತನ್ನ ಜೀವಕ್ಕೆ ಅಪಾಯವಿರುವ ಕಾರಣ ರಾವಲ್ಪಿಂಡಿಯ ನ್ಯಾಯಾಲಯದಿಂದ ಲಾಹೋರ್ನಲ್ಲಿನ ಉಗ್ರ ನಿಗ್ರಹ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವಂತೆ ಲಾಹೋರ್ ಹೈಕೋರ್ಟಿನಲ್ಲಿ ಲಖ್ವಿ ಜನವರಿ 12ರಂದು ಅರ್ಜಿ ಸಲ್ಲಿಸಿದ್ದ.
2008ರ ನವೆಂಬರ್ ತಿಂಗಳಲ್ಲಿ ಭಾರತದ ವಾಣಿಜ್ಯ ರಾಜಧಾನಿಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಲಖ್ವಿ, ಝರಾರ್ ಶಾ, ಅಬು ಅಲ್ ಖಾಮ, ಹಮಾದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಕೈವಾಡವಿದೆ ಎಂದು ಆರೋಪಿಸಿ ಬಂಧಿಸಲಾಗಿತ್ತು.