ಚುನಾವಣಾ ಪೂರ್ವ ಹಿಂಸಾಚಾರ ಉಲ್ಬಣಿಸುತ್ತಿದ್ದು, ಎರಡನೇ ಬಾರಿಗೆ ರಾಜಕೀಯ ಕಾರ್ಯಕರ್ತನೊಬ್ಬನ ಹತ್ಯೆಯ ಹಿನ್ನೆಲೆಯಲ್ಲಿ ಭಾರಿ ಬಿಗಿ ಕಟ್ಟೆಚ್ಚರ ವಹಿಸುವಂತೆ ಲಂಕಾ ಅಧ್ಯಕ್ಷರು ಆದೇಶಿಸಿದ್ದಾರೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಿಂದ ನೈಋತ್ಯ ಭಾಗದಲ್ಲಿರುವ ಪುಟ್ಟಾಲಂ ಜಿಲ್ಲೆಯಲ್ಲಿ, ಅಧಿಕಾರ ರೂಢ ಪಕ್ಷದ ಕಾರ್ಯಕರ್ತನನ್ನು ಶನಿವಾರದಂದು ಹತ್ಯೆ ಮಾಡಲಾಗಿದ್ದು, ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಾಧ್ಯಕ್ಷ ಮಹೀಂದ್ರಾ ರಾಜ್ಪಕ್ಸೆ ಕಾರ್ಯಕರ್ತರ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದು, ಜನೆವರಿ 26 ರಂದು ನಡೆಯಲಿರುವ ಚುನಾವಣೆ ಶಾಂತಿಯುತವಾಗಿ ನಡೆಯಲು ಪೊಲೀಸರು ಸೂಕ್ತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪರ, ವಿರೋಧ ಪಕ್ಷಗಳು ಘರ್ಷಣೆಯಲ್ಲಿ ತೊಡಗಿ ಹಲವಾರು ವಾಹನಗಳು ಹಾಗೂ ಕಟ್ಟಡಗಳಿಗೆ ಕಲ್ಲುತೂರಾಟ ನಡೆಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರವಾಯು ಸಿಡಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.