ಭಾರತಕ್ಕೆ ಬಾಂಗ್ಲಾ ಹಿತಾಸಕ್ತಿ ಮಾರಾಟ: ಹಸೀನಾಗೆ ಜಿಯಾ ಕಿಡಿ
ಢಾಕಾ, ಸೋಮವಾರ, 18 ಜನವರಿ 2010( 10:38 IST )
ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ತನ್ನ ಭಾರತ ಪ್ರವಾಸದ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು 'ಬಾಂಗ್ಲಾದೇಶದ ಹಿತಾಸಕ್ತಿಯ ಮಾರಾಟ' ಎಂದು ವಿರೋಧ ಪಕ್ಷದ ನಾಯಕಿ ಹಾಗೂ ಮಾಜಿ ಪ್ರಧಾನಿ ಖಾಲಿದ್ ಜಿಯಾ ಟೀಕಿಸುವುದರೊಂದಿಗೆ ಇಬ್ಬರು 'ಬೇಗಂ'ಗಳ ನಡುವಿನ ವಾಗ್ಯುದ್ಧ ಮತ್ತೊಂದು ಮಜಲಿಗೆ ತಲುಪಿದೆ.
ಅವಾಮಿ ಲೀಗ್ ನೇತೃತ್ವದ ಸರಕಾರದ 'ದಾಸ್ಯ ನೀತಿ'ಗಳನ್ನು ತೀವ್ರವಾಗಿ ವಿರೋಧಿಸಿರುವ ಬಿಎನ್ಪಿ ಮುಖ್ಯಸ್ಥೆ ಜಿಯಾ, ಭಾರತದೊಂದಿಗಿನ ಒಪ್ಪಂದವನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ ರಾಷ್ಟ್ರದ ಹಿತಾಸಕ್ತಿಯನ್ನು ಭಾರತಕ್ಕೆ ಮಾರಾಟ ಮಾಡಿರುವ ಸರಕಾರದ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅಭಿಪ್ರಾಯ ಸಂಗ್ರಹಿಸಿತ್ತೇನೆ ಎಂದಿದ್ದಾರೆ.
ನಾವು ಭಾರತ ವಿರೋಧಿಗಳಲ್ಲ. ಆದರೆ ಏಕಪಕ್ಷೀಯವಾಗಿ ನಾವು ಭಾರತಕ್ಕೆ ಎಲ್ಲವನ್ನೂ ನೀಡುವುದನ್ನು ಮುಂದುವರಿಸುವುದು ಸ್ವೀಕಾರಾರ್ಹವಲ್ಲ ಎಂದು ಹಸೀನಾ ತನ್ನ ಚೊಚ್ಚಲ ದೆಹಲಿ ಪ್ರವಾಸದ ಪ್ರಮುಖ ಅಂಶಗಳನ್ನು ವಿವರಿಸಿದ ನಂತರ ಜಿಯಾ ಹೇಳಿದ್ದಾರೆ.
ನಾವು ಈ ಜಂಟಿ ಅಧಿಕೃತ ಒಪ್ಪಂದವನ್ನು ತಿರಸ್ಕರಿಸುತ್ತಿದ್ದೇವೆ. ಜನ ಇದನ್ನು ಸ್ವೀಕರಿಸುವುದಿಲ್ಲ. ಅಲ್ಲದೆ ಹಸೀನಾ ಅವರು ಭಾರತದ ಜತೆ ಮಾಡಿಕೊಂಡಿರುವ ಮೂರು ಒಪ್ಪಂದಗಳಲ್ಲಿ ಗುಪ್ತ ಒಪ್ಪಂದವೊಂದೂ ಸೇರಿದೆ ಎಂಬ ಭೀತಿಯೂ ನನಗಿದೆ. ಈ ಒಪ್ಪಂದವು ರಾಷ್ಟ್ರವನ್ನೇ ಕತ್ತಲ ಕೂಪಕ್ಕೆ ತಳ್ಳುತ್ತದೆ. ಇದನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಬೇಕು ಮತ್ತು ಅದರ ಕುರಿತು ಚರ್ಚೆ ನಡೆಯುವ ಅಗತ್ಯವಿದೆ ಎಂದು ಜಿಯಾ ಆಗ್ರಹಿಸಿದರು.
ದ್ವಿಪಕ್ಷೀಯ ಸಂಬಂಧಗಳ ನಿಟ್ಟಿನಲ್ಲಿ ಇಂಡೋ-ಬಾಂಗ್ಲಾ ಒಪ್ಪಂದವು 'ದಿಟ್ಟ ರೂಪಾಂತರ' ಎಂದು ಹೇಳಲಾಗಿದ್ದರೂ, ಇದನ್ನು ನಿರಾಕರಿಸಿರುವ ಜಿಯಾ, ಹಸೀನಾರ ಭೇಟಿ ಭಾರತಕ್ಕೆ ಯಶಸ್ಸು, ಬಾಂಗ್ಲಾದೇಶಕ್ಕಲ್ಲ ಎಂದು ತಿರುಗೇಟು ನೀಡಿದ್ದಾರೆ. ತನ್ನ ಭೇಟಿ ಯಶಸ್ವಿಯಾಗಿದೆ ಎಂದು ಹಸೀನಾ ಈ ಹಿಂದೆ ಹೇಳಿಕೆ ನೀಡಿದ್ದರು.
ಭಾರತವನ್ನು ವಿರೋಧಿಸುವುದು ಬಾಂಗ್ಲಾದೇಶಕ್ಕೆ ಹೊಸತಲ್ಲ. ಭಾರತ ವಿರೋಧಿ ಪ್ರಚಾರವನ್ನು ನಾವು 1954ರ ಚುನಾವಣೆಗಳಿಂದ ಒಗ್ಗಟ್ಟಾಗಿ ನಡೆಸುತ್ತಾ ಬಂದಿದ್ದೇವೆ. ಕೆಲವು ಜನಕ್ಕೆ ಇದೇ ಹವ್ಯಾಸವಾಗಿ ಹೋಗಿದೆ. ಇದರಿಂದ ಏನೂ ಸಾಧಿಸಲಾಗದು ಎಂದು ಹಸೀನಾ ಹೇಳಿದ್ದರು.