ಮುಂಬೈ ದಾಳಿಯ ಸಂಚುಕೋರ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಶಂಕಿತ ಉಗ್ರ ತವ್ವೂರ್ ರಾಣಾ ಒಂದು ವೇಳೆ ಜಾಮೀನಿನ ಮೇಲೆ ಬಿಡುಗೊಂಡಲ್ಲಿ ದೇಶಬಿಟ್ಟು ಪಲಾಯನಗೈಯುವ ನಿಟ್ಟಿನಲ್ಲಿ ಅಪಾಯಕಾರಿ ಉಗ್ರಗಾಮಿ ಸಂಘಟನೆಗಳಿಂದ ಆರ್ಥಿಕ ನೆರವು ಪಡೆಯುವ ಸಾಮರ್ಥ್ಯ ಹೊಂದಿರುವುದಾಗಿ ಎಫ್ಬಿಐ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದ ಸಂಚಿನ ರೂವಾರಿ ಎಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಹೊಸ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ತನ್ನ ಬಂಧನದ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ ರಾಣಾ ಸಲ್ಲಿಸಿದ್ದ ಮೇಲ್ಮನವಿಗೆ ವಿರುದ್ಧವಾಗಿ ಸರ್ಕಾರ ಸಲ್ಲಿಸಿರುವ 33ಪುಟಗಳ ಮನವಿಯಲ್ಲಿ, ರಾಣಾಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದೇ ಆದಲ್ಲಿ ಆತ ದೇಶ ಬಿಟ್ಟು ಪಲಾಯನಗೈಯುವ ಸಾಧ್ಯತೆ ಇರುವುದಾಗಿ ತಿಳಿಸಿದೆ. ಅಲ್ಲದೇ ರಾಣಾ ಅಪಾಯಕಾರಿ ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದೆ.
ಮುಂಬೈ ದಾಳಿ ಮತ್ತು ಡೆನ್ಮಾರ್ಕ್ ಪತ್ರಿಕಾ ಕಚೇರಿ ಸ್ಫೋಟ ಸಂಚು ಕುರಿತಂತೆ ಜನವರಿ 15ರಂದು ಅಮೆರಿಕ ರಾಣಾ ಮತ್ತು ಡೇವಿಡ್ ಹ್ಯಾಡ್ಲಿ ವಿರುದ್ಧ ಗ್ರ್ಯಾಂಡ್ ಜ್ಯೂರಿ 12ಕೌಂಟ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.