ಬಾಂಗ್ಲಾದೇಶ ಸಂಸ್ಥಾಪಕ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದ ಐದು ಮಂದಿ ಹಂತಕರನ್ನು ಗುರುವಾರ ಗಲ್ಲಿಗೇರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಐದು ಮಂದಿ ಆರೋಪಿಗಳು ಕೊನೆಯ ಹೋರಾಟ ಎಂಬಂತೆ ತಮಗೆ ವಿಧಿಸಿದ್ದ ಶಿಕ್ಷೆಯನ್ನು ಪುನರ್ ಪರಿಶೀಲಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಬುಧವಾರ ತಿರಸ್ಕರಿಸಿ, ಗಲ್ಲಿಗೇರಿಸುವಂತೆ ಅಂತಿಮ ತೀರ್ಪು ನೀಡಿತ್ತು.
ಕೊನೆಯ ಗಳಿಗೆಯಲ್ಲಿ ಕ್ಷಮಾದಾನ ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಮನವಿಯನ್ನೂ ಕೂಡ ಬಾಂಗ್ಲಾ ಅಧ್ಯಕ್ಷರು ವಜಾಗೊಳಿಸಿದ್ದರು. ಇಂದು ಬೆಳಿಗ್ಗೆ ಐದು ಮಂದಿಯನ್ನು ನೇಣುಗಂಬಕ್ಕೆ ಏರಿಸಲಾಯಿತು ಎಂದು ಸಹಾಯಕ ಕಾನೂನು ಸಚಿವ ಕಮರೂಲ್ ಇಸ್ಲಾಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಂತಕರನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಹಳೇ ಢಾಕಾದ ಹೊರಭಾಗದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಅಲ್ಲದೇ ಆಡಳಿತಾರೂಢ ಅವಾಮಿ ಲೀಗ್ನ ಬೆಂಬಲಿಗರು ನೆರೆದಿದ್ದು, 'ಇದು ಅಂತಿಮ ನ್ಯಾಯ, ಹಂತಕರನ್ನು ಬಾಂಗ್ಲಾ ಮಣ್ಣಿನಲ್ಲಿ ಹೂಳಬೇಡಿ' ಎಂಬ ಘೋಷಣೆಯನ್ನು ಈ ಸಂದರ್ಭದಲ್ಲಿ ಕೂಗಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.