ಶ್ರೀಲಂಕಾ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿರುವ ಸೇನಾ ಮಾಜಿ ಮುಖ್ಯಸ್ಥ ಜನರಲ್ ಸರತ್ ಫೋನ್ಸೆಕಾ ಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ ಹತ್ಯೆಗೆ ಪಿತೂರಿ ನಡೆಸಿರುವುದಾಗಿ ಲಂಕಾ ಸರ್ಕಾರ ಗಂಭೀರವಾಗಿ ಆರೋಪಿಸಿದೆ.
ಶ್ರೀಲಂಕಾದ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಪಕ್ಸೆ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆಗೈಯಲು ಫೋನ್ಸೆಕಾ ಸಂಚು ರೂಪಿಸಿರುವುದಾಗಿ ದೂರಿದ್ದಾರೆ. ಅಲ್ಲದೇ, ಅಧ್ಯಕ್ಷರ ಹತ್ಯೆಗೆ ಪಿತೂರಿ ನಡೆಸಿರುವ ಬಗ್ಗೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ.
ಮಹೀಂದ ರಾಜಪಕ್ಸೆ ಅವರು ಲಂಕಾ ಅಧ್ಯಕ್ಷ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಸರತ್ ಫೋನ್ಸೆಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಆದರೆ ರಾಜಪಕ್ಸೆ ಚುನಾವಣೆಯಲ್ಲಿ ಅಕ್ರಮ ಎಸಗಿರುವುದಾಗಿ ಆರೋಪಿಸಿರುವ ಫೋನ್ಸೆಕಾ, ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಬೆದರಿಕೆ ಹಾಕಿದ್ದರು.
ಏತನ್ಮಧ್ಯೆ, ಫೋನ್ಸೆಕಾ ಅವರು ರಾಜಪಕ್ಸೆ ಅವರ ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಿಸಿರುವ ಲಂಕಾ ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಫೋನ್ಸೆಕಾ ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.