ಮುಂಬೈ ದಾಳಿ ಆರೋಪಿಗಳನ್ನು ಪಾಕಿಸ್ತಾನ ರಕ್ಷಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ನೀವು ಆರೋಪಿಯೆಂದು ಹೇಳುತ್ತಿರುವ ಹಫೀಜ್ ಸೈಯದ್ ವಿರುದ್ಧ ನಂಬಲರ್ಹ ಸಾಕ್ಷ್ಯಗಳನ್ನು ನೀಡಿ ಎಂದು ಹೇಳಿದೆ.
ಹಫೀಜ್ ಸೈಯದ್ ವಿರುದ್ಧ ವಿಚಾರಣೆಯು ನಡೆಯುತ್ತಿದ್ದು, ಆತನ ಬಂಧನವನ್ನು ನ್ಯಾಯಾಲಯವಷ್ಟೇ ನಿರ್ಧರಿಸಬೇಕಿದೆ. ಈ ಕುರಿತು ಭಾರತ ಸಾಕಷ್ಟು ಮಾಹಿತಿಗಳನ್ನು ಇಸ್ಲಾಮಾಬಾದ್ಗೆ ನೀಡಿಲ್ಲ ಎಂದು ಗಿಲಾನಿ ಹೇಳಿದ್ದಾರೆ.
ಹಫೀಜ್ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಮಗೆ ಪುರಾವೆಗಳ ಅಗತ್ಯವಿದೆ. ಆತನ ಬಂಧನದ ಕುರಿತು ಪಾಕಿಸ್ತಾನದ ನ್ಯಾಯಾಂಗ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಂಬೈ ದಾಳಿ ಬಳಿಕ ಮೊತ್ತ ಮೊದಲ ಬಾರಿಗೆ ಭಾರತೀಯ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಪಾಲ್ಗೊಂಡ ಬಗ್ಗೆ ಲಷ್ಕರ್ ಇ ತೋಯ್ಬಾದ ಮುಖ್ಯಸ್ಥ ಝಾಕಿರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಮಂದಿಯ ವಿರುದ್ದ ಪ್ರಬಲ ಸಾಕ್ಷ್ಯವಿದೆ ಎಂದು ದಾಖಲೆಗಳ ಸಮೇತ ಪಾಕಿಸ್ತಾನದ ತನಿಖಾ ದಳಗಳು ಅಲ್ಲಿನ ಉಗ್ರ ನಿಗ್ರಹ ನ್ಯಾಯಾಲಯಕ್ಕೆ ವರದಿ ನೀಡಿದ್ದವು. ಆದರೆ ಅದರಲ್ಲಿ ಹಫೀಜ್ ಪ್ರಸ್ತಾಪವಿರಲಿಲ್ಲ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿದ್ದ ಭಾರತ, ಮುಂಬೈ ದಾಳಿಯ ಹಿಂದೆ ಹಫೀಜ್ ಮಹತ್ವದ ಪಾತ್ರ ವಹಿಸಿದ್ದಾನೆ ಎಂದು ತಾನು ನಿರಂತರವಾಗಿ ಹೇಳುತ್ತಾ ದಾಖಲೆಗಳನ್ನು ನೀಡಿದ್ದರೂ ಪಾಕಿಸ್ತಾನ ಕ್ರಮ ಕೈಗೊಂಡಿಲ್ಲ ಎಂದು ಹೇಳಿತ್ತು.