ಇನ್ನುಳಿದ 6ಹಂತಕರನ್ನು ಗಲ್ಲಿಗೇರಿಸದೆ ಬಿಡಲಾರೆ: ಹಸೀನಾ ಶಪಥ
ಢಾಕಾ, ಭಾನುವಾರ, 31 ಜನವರಿ 2010( 15:14 IST )
PTI
ಬಾಂಗ್ಲಾದೇಶದ ಸಂಸ್ಥಾಪಕ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದು ತಲೆತಪ್ಪಿಸಿಕೊಂಡಿರುವ ಇನ್ನುಳಿದ ಆರು ಮಂದಿ ಹಂತಕರನ್ನು ಪತ್ತೆ ಹಚ್ಚಿ ಅವರನ್ನು ನೇಣುಗಂಬಕ್ಕೆ ಏರಿಸದೆ ಬಿಡಲಾರೆ ಎಂದು ಮುಜಿಬುರ್ ಪುತ್ರಿ, ಹಾಲಿ ಪ್ರಧಾನಿ ಶೇಕ್ ಹಸೀನಾ ಶಪಥಗೈದಿದ್ದಾರೆ.
ಮುಜಿಬುರ್ ರೆಹಮಾನ್ ಅವರನ್ನು ಕೊಲೆಗೈದ ಐದು ಮಂದಿ ಆರ್ಮಿಯ ಮಾಜಿ ಅಧಿಕಾರಿಗಳನ್ನು ಇತ್ತೀಚೆಗಷ್ಟೇ ನೇಣುಗಂಬಕ್ಕೆ ಏರಿಸಲಾಗಿತ್ತು. ಈ ಘಟನೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಹಂತಕರು ಎಲ್ಲಿ ಅಡಗಿಕೊಳ್ಳುತ್ತಾರೆ ? ಜಗತ್ತು ತುಂಬಾ ವಿಶಾಲವಾಗಿದೆ. ಇದು ಸತ್ಯ, ಆದರೆ ಅದು ಅಷ್ಟೇ ಚಿಕ್ಕದು ಎಂಬುದನ್ನು ಕೊಲೆಗಡುಕರು ತಿಳಿದುಕೊಳ್ಳಬೇಕು. ಅವರು ಎಲ್ಲಿಯೇ ಅಡಗಿರಲಿ. ಅವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಗುಡುಗಿದ್ದಾರೆ.
ತನ್ನ ತಂದೆಯನ್ನು ಕೊಂದು, ತಲೆತಪ್ಪಿಸಿಕೊಂಡಿರುವ ಆರು ಮಂದಿ ಹಂತಕರನ್ನು ಮತ್ತೆ ಬಾಂಗ್ಲಾಕ್ಕೆ ಕರೆತಂದು ನೇಣುಗಂಬಕ್ಕೆ ಏರಿಸುವುದಾಗಿ ಪ್ರತಿಜ್ಞೆಗೈದಿದ್ದಾರೆ.
1975ರ ಆಗೋಸ್ಟ್ 15ರಂದು ಬಂಗಬಂಧು ಎಂದೇ ಜನಾನುರಾಗಿಯಾಗಿದ್ದ ಬಾಂಗ್ಲಾ ಸ್ಥಾಪಕಾಧ್ಯಕ್ಷ ಮುಜಿಬುರ್ ರೆಹಮಾನ್ ಸೇರಿದಂತೆ ಕುಟುಂಬ ವರ್ಗದವರನ್ನು ಅಮಾನುಷವಾಗಿ ಕೊಲೆಗೈಯಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ 12ಮಂದಿ ಆರೋಪಿತರಲ್ಲಿ ಕಳೆದ ಬುಧವಾರ ರಾತ್ರಿ 5ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಒಬ್ಬ ಆರೋಪಿ ಕಳೆದ ಎಂಟು ವರ್ಷದ ಹಿಂದೆಯೇ ಜಿಂಬಾಬ್ವೆಯಲ್ಲಿ ಸಾವನ್ನಪ್ಪಿದ್ದು, ಇನ್ನುಳಿದ ಆರು ಮಂದಿ ತಲೆತಪ್ಪಿಸಿಕೊಂಡಿದ್ದಾರೆ.
ತಂದೆಯನ್ನು ಹತ್ಯೆಗೈದ ಹಂತಕರ ಮರಣದಂಡನೆಯನ್ನು ನೋಡದೆ ತಾನು ಸಾವನ್ನಪ್ಪಿದ್ದಲ್ಲಿ ತನಗೆ ಮನಶಾಂತಿ ದೊರಕುತ್ತಿರಲಿಲ್ಲ. ಇಡೀ ದೇಶದವೇ ಮುಜಿಬುರ್ ಹಂತಕರ ಶಿಕ್ಷೆಗಾಗಿ ಕಳೆದ 34ವರ್ಷಗಳಿಂದ ಕಾದಿರುವುದಾಗಿ ಬಾವುಕರಾಗಿ ನುಡಿದರು.