ಇನ್ಸೂರೆನ್ಸ್ ಹಣ ಪಡೆಯುವ ನಿಟ್ಟಿನಲ್ಲಿ ತನ್ನ ಮೇಲೆ ಜನಾಂಗೀಯ ದಾಳಿ ನಡೆಸಿರುವುದಾಗಿ ಭಾರತೀಯ ವ್ಯಕ್ತಿ ಸುಳ್ಳು ಹೇಳಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ಗಂಭೀರವಾಗಿ ಆರೋಪಿಸುವ ಮೂಲಕ ಪ್ರಕರಣ ತಿರುವು ಪಡೆದುಕೊಂಡಿದೆ.
ತನ್ನ ಕಾರಿಗೆ ನಾಲ್ಕು ಮಂದಿ ಆಸ್ಟ್ರೇಲಿಯ ಯುವಕರು ಜನಾಂಗೀಯ ದಾಳಿ ನಡೆಸಿ ಬೆಂಕಿ ಹಚ್ಚಿ, ಹಲ್ಲೆ ನಡೆಸಿರುವುದಾಗಿ ಭಾರತೀಯ ಮೂಲದ ಜಸ್ಪ್ರೀತ್ ಸಿಂಗ್ ದೂರಿದ್ದ. ಆದರೆ ಇದೀಗ ತಾನು ಇನ್ಸೂರೆನ್ಸ್ ಹಣ ಪಡೆಯಲು ಸ್ವತಃ ಕಾರಿಗೆ ಬೆಂಕಿ ಹಚ್ಚಿರುವುದಾಗಿ ಸಿಂಗ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಕಾರಿಗೆ ಹಿಡಿದ ಬೆಂಕಿಯಿಂದಾಗಿ ಸಿಂಗ್ ಬಟ್ಟೆ ಕೂಡ ಸುಟ್ಟು ಹೋಗಿತ್ತು. ಆದರೆ ಆತ ಹೇಳಿದ ಕಥೆಗೂ ಕಾರಿನ ಬೆಂಕಿ ಪ್ರಕರಣ ಹೊಂದಾಣಿಕೆ ಆಗುತ್ತಿಲ್ಲ ಎಂದು ಆಸ್ಪತ್ರೆಯ ವರದಿ ತಿಳಿಸಿದ ನಂತರ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು.
ಕಾರು ಸುಟ್ಟು ಹೋದ ಪ್ರಕರಣದ ನಂತರ ಜಸ್ಪ್ರೀತ್ ಸಿಂಗ್ ಸುಮಾರು 11ಸಾವಿರ ಆಸ್ಟ್ರೇಲಿಯನ್ ಡಾಲರ್ಸ್ ಇನ್ಸೂರೆನ್ಸ್ ಹಣ ಪಡೆದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಸಿಂಗ್ ಬಂಧನದ ಸಂದರ್ಭದಲ್ಲಿ,ಆತ ಕಾರಿಗೆ ಬೆಂಕಿ ಹಚ್ಚಲು ಬಳಸಿದ್ದ ಕಂಟೈನರ್ ಹಾಗೂ ಇನ್ನಿತರ ಸಾಕ್ಷ್ಯಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.