ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದಿರುವ ಕಾಶ್ಮೀರ ಮತ್ತು ನೀರಿನ ವಿವಾದಗಳು ಬಗೆಹರಿಯದ ಹೊರತು ಪಾಕಿಸ್ತಾನ ಸೇನೆಯು ಭಾರತ ಕೇಂದ್ರೀಕೃತ ತರಬೇತಿ ನೀತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸೇನೆಯ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಖಯಾನಿ ತಿಳಿಸಿದ್ದಾರೆ.
ನಾವು ಎದುರಾಳಿಗಳ ಸಾಮರ್ಥ್ಯಗಳ ಮೇಲೆ ಯೋಜನೆಗಳನ್ನು ರೂಪಿಸಬೇಕೇ ಹೊರತು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳಿಗೆ ವಿಶೇಷವಾಗಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಖಯಾನಿ ಹೇಳಿದರು.
ಭಾರತವು ತನ್ನ ಯುದ್ಧ ತಂತ್ರಕ್ಕೆ ಒಳಗೊಳಗೆ ಚಾಲನೆ ನೀಡುವ ಮೂಲಕ ಬೆದರಿಕೆಯಾಗುತ್ತಿರುವುದನ್ನೂ ಇದೇ ಸಂದರ್ಭದಲ್ಲಿ ಖಯಾನಿ ಬೆಟ್ಟು ಮಾಡಿದ್ದಾರೆ.
ಅವರ ಪ್ರಕಾರ ಯುದ್ಧದ ಸಾಂಪ್ರದಾಯಿಕತೆ ಭಾರತದ ತಲೆಯಲ್ಲಿದೆ. ಈ ಶೀತಲ ಸ್ಥಿತಿಯಲ್ಲಿರುವ ಆರಂಭವು ಭಾರತೀಯ ಸೇನೆಯಿಂದ ದಾಳಿಗೆ ಒಪ್ಪಿಗೆ ಸೂಚಿಸಬೇಕಿದೆ ಎಂದು ಖಯಾನಿ ಅಭಿಪ್ರಾಯಪಟ್ಟರು.
ದಕ್ಷಿಣ ಏಷಿಯಾದ ಎರಡು ಪರಮಾಣು ರಾಷ್ಟ್ರಗಳು ತಮ್ಮ ಮಿಲಿಟರಿ ಸಮತೋಲನವನ್ನು ಕಾಯ್ದುಕೊಳ್ಳುವ ಕುರಿತು ಕೂಡ ಖಯಾನಿ ಮಾತನಾಡಿದ್ದಾರೆ.
ಭಾರತದ ರಕ್ಷಣಾ ಬಜೆಟ್ ಪಾಕಿಸ್ತಾನದ ಬಜೆಟ್ಗಿಂತ ಏಳು ಪಟ್ಟು ಹೆಚ್ಚಾಗಿರುವ ಹೊರತಾಗಿಯೂ ನಮ್ಮಲ್ಲಿ ಅಭಿವೃದ್ಧಿ ಮತ್ತು ಮಿಲಿಟರಿಗೆ ಮಾಡಲಾಗುತ್ತಿರುವ ಖರ್ಚಿನಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುತ್ತಿದೆ ಎಂದು ಖಯಾನಿ ಹೇಳಿದ್ದಾರೆಂದು 'ದಿ ಡಾನ್' ವರದಿ ಮಾಡಿದೆ.
ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆಗಿನ ಮಾತುಕತೆಗಳನ್ನು ತಳ್ಳಿ ಹಾಕಿರುವ ಭಾರತದ ನಿಲುವಿನ ಬಗ್ಗೆ ಖಯಾನಿಯವರು, ಯಾವುದೇ ರಾಷ್ಟ್ರಕ್ಕೆ ಸೇರಿರದ ಏಕೈಕ ಭಯೋತ್ಪಾದನಾ ದಾಳಿಯನ್ನು ಮುಂದಿಟ್ಟುಕೊಂಡು ದಕ್ಷಿಣ ಏಷಿಯಾದಲ್ಲಿನ ಶಾಂತಿ ಮತ್ತು ಸ್ಥಿರತೆಯನ್ನು ಬಲಿ ಕೊಡುವುದು ಸಲ್ಲದು ಎಂದರು.