ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸಿ; ಪಾಕ್ಗೆ ಜಿಹಾದಿಗಳ ಆಗ್ರಹ
ಇಸ್ಲಾಮಾಬಾದ್, ಶುಕ್ರವಾರ, 5 ಫೆಬ್ರವರಿ 2010( 17:44 IST )
ಜಿಹಾದಿ ಗುಂಪುಗಳ ಮೇಲೆ ಪಾಕಿಸ್ತಾನ ಸರಕಾರ ಹೇರಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವ ಮೂಲಕ ತಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಭಯೋತ್ಪಾದಕ ಸಂಘಟನೆ 'ಲಷ್ಕರ್ ಇ ತೋಯ್ಬಾ'ದ ಅಂಗಸಂಸ್ಥೆ ಜಮಾತ್ ಉದ್ ದಾವಾ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ.
ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದನ್ನು ಭಯೋತ್ಪಾದಕ ಸಂಘಟನೆಗಳ ಮೂಲ ನೆಲೆಯಾಗಿ ಮರು ನಿರ್ಮಾಣಗೊಳಿಸಬೇಕು ಮತ್ತು ಕಾಶ್ಮೀರಿ ಜಿಹಾದಿ ಗುಂಪುಗಳ ಮೇಲೆ ಹೇರಲಾಗಿರುವ ನಿಷೇಧವನ್ನು ರದ್ದುಗೊಳಿಸಬೇಕು ಎಂದು ಮುಜಾಫರಾಬಾದ್ನಲ್ಲಿ ನಡೆದ 'ಕಾಶ್ಮೀರಕ್ಕಾಗಿ ಐಕ್ಯತೆ' ಎಂದು ಹೆಸರಿಸಲಾಗಿರುವ ಸಮಾವೇಶದಲ್ಲಿ ಒಕ್ಕೊಲಿನ ತೀರ್ಮಾನಕ್ಕೆ ಬರಲಾಗಿದೆ.
ಕಾಶ್ಮೀರಿಗಳಿಗೆ ಆಡಳಿತಗಾರರು ಸಹಾಯ ಮಾಡದೇ ಇದ್ದರೆ, ಅವರು ಅಡಚಣೆಗಳನ್ನು ಸೃಷ್ಟಿಸುವ ಬದಲು ಕಾಶ್ಮೀರಿ ಮುಜಾಹಿದೀನ್ಗಳಿಗೆ ಮುಕ್ತ ಅವಕಾಶ ನೀಡುತ್ತಾರೆ. ಮುಜಾಹಿದೀನ್ಗಳು ಭಾರತದೊಂದಿಗೆ ಹೋರಾಡುತ್ತಾರೆ ಎಂದು ಸಭೆ ತೆಗೆದುಕೊಂಡ ನಿರ್ಧಾರವನ್ನು ಉರ್ದು ಭಾಷೆಯಲ್ಲಿ ಪ್ರಕಟಿಸಲಾಗಿದೆ.
2008ರ ಮುಂಬೈ ದಾಳಿಯ ನಂತರ ಜಮಾತ್ ಉದ್ ದಾವಾ ಆಯೋಜಿಸಿದ ಮೊದಲ ಬೃಹತ್ ಸಮಾವೇಶ ಇದಾಗಿತ್ತು.
ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಪಿತೂರಿ ನಡೆಸಬೇಕೆಂಬ ಅಮೆರಿಕಾ ಅಜೆಂಡಾವನ್ನು ಪಾಕಿಸ್ತಾನದ ಆಡಳಿತಗಾರರು ತಡೆಯಬೇಕು. ಯಾವುದೇ ಪಿತೂರಿಗಳ ಹೊರತಾಗಿಯೂ ಕಾಶ್ಮೀರಕ್ಕಾಗಿನ ಸ್ವಾತಂತ್ರ್ಯ ಹೋರಾಟ ತಡೆಯಿಲ್ಲದೆ ಮುಂದುವರಿಯಲಿದೆ ಎಂದು ಅದು ಸ್ಪಷ್ಟಪಡಿಸಿದೆ.
ಅಲ್ಲದೆ ಭಾರತದೊಂದಿಗಿನ ಸ್ನೇಹ ಮತ್ತು ವ್ಯವಹಾರಗಳನ್ನು ವಿಫಲಗೊಳಿಸುವ ಯತ್ನಗಳತ್ತ ಗುರಿಯಿಡಬೇಕೆಂಬ ನಿರ್ಧಾರಕ್ಕೂ ಮೂಲಭೂತವಾದಿ ಸಂಘಟನೆಗಳು ಇದೇ ಸಂದರ್ಭದಲ್ಲಿ ಬಂದಿವೆ.
ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್, ಅಲ್ ಬದ್ರ್ ನಾಯಕ ಭಕ್ತ್ ಜಮೀನ್, ಯುನೈಟೆಡ್ ಜಿಹಾದ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಶೇಖ್ ಜಮೀಲುರ್ ರೆಹಮಾನ್, ಜಮಾತ್ ಉದ್ ದಾವಾ ನಾಯಕರುಗಳಾದ ಅಬ್ದುಲ್ ಅಜೀಜ್ ಅಲ್ವಿ, ಅಬ್ದುರ್ ರೆಹಮಾನ್ ಮಕ್ಕಿ ಹಾಗೂ ಐಎಸ್ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಮುಂತಾದ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಜಮಾತ್ ಉದ್ ದಾವಾ ವಕ್ತಾರ ಯಾಹ್ಯಾ ಮುಜಾಹಿದ್ ದೂರವಾಣಿ ಮುಖಾಂತರ ತಿಳಿಸಿದ್ದಾನೆ.