ಮುಂಬೈ ದಾಳಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಪಾಕ್ ಜೊತೆ ಸುತಾರಾಂ ಮಾತುಕತೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದ ಭಾರತ ಇದೀಗ ತಾನೇ ಪಾಕ್ ಅನ್ನು ಮಾತುಕತೆಗೆ ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ನೀರು ವಿವಾದ ಸೇರಿದಂತೆ ಎಂಟು ಸಮಸ್ಯೆಗಳ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿರುವುದಾಗಿ ಪಾಕಿಸ್ತಾನ ಕೂಡ ಪ್ರತಿಕ್ರಿಯೆ ನೀಡಿದೆ.
ಭಾರತದ ಮಾತುಕತೆಯ ಪ್ರಸ್ತಾಪವನ್ನು ಹಾರ್ದಿಕವಾಗಿ ಸ್ವಾಗತಿಸಿರುವುದಾಗಿ ಹೇಳಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿಸ್ಟ್, ಎರಡು ರಾಷ್ಟ್ರಗಳ ನಡುವಿನ ಸಮಸ್ಯೆಗಳ ಇತ್ಯರ್ಥ ಕುರಿತಾಗಿ ಈ ಚರ್ಚೆ ಮುಂದುವರಿಯಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಟೆಲಿವಿಷನ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕ್ ನಡುವೆ ಸೌಹಾರ್ದತೆ ಬೆಳವಣಿಗೆ ಮುಂದುವರಿಯುವ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತುಕತೆ ನಡೆಯಬೇಕು ಎಂಬ ಭಾರತದ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಹೇಳಿದರು.
ಅಲ್ಲದೇ, ಪಾಕಿಸ್ತಾನ ಯಾವಾಗಲೂ ಫಲಿತಾಂಶ ಆಧಾರಿತ ಮಾತುಕತೆಯನ್ನೇ ಬಯಸುತ್ತದೆ. ಅದರಲ್ಲೂ ಭಯೋತ್ಪಾದನೆ ಸೇರಿದಂತೆ ಹಲವು ಪ್ರಮುಖ ವಿವಾದಗಳು ಸೇರಿವೆ ಎಂದರು.